Thursday, May 2, 2024
Homeರಾಷ್ಟ್ರೀಯಲಿಕ್ಕರ್ ನೀತಿ ಹಗರಣ : ಎಎಪಿ ರಾಜ್ಯಸಭೆ ಸಂಸದ ಸಂಜಯ್ ಸಿಂಗ್ ನಿವಾಸದ ಮೇಲೆ ಇ.ಡಿ...

ಲಿಕ್ಕರ್ ನೀತಿ ಹಗರಣ : ಎಎಪಿ ರಾಜ್ಯಸಭೆ ಸಂಸದ ಸಂಜಯ್ ಸಿಂಗ್ ನಿವಾಸದ ಮೇಲೆ ಇ.ಡಿ ದಾಳಿ

ಹೊಸದಿಲ್ಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ಸಂಸದ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಶೋಧ ನಡೆಸಿದರು.

ರಾಜ್ಯಸಭೆ ಸಂಸದರೂ ಆಗಿರುವ ಸಂಜಯ್ ಸಿಂಗ್ ಅವರ ದಿಲ್ಲಿ ನಿವಾಸಕ್ಕೆ ಇ.ಡಿ ಅಧಿಕಾರಿಗಳು ಮುಂಜಾನೆ ತೆರಳಿದ್ದಾರೆ. ರಾಜಧಾನಿ ದಿಲ್ಲಿಯ ಎಎಪಿ ಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ ಫೆಬ್ರವರಿಯಲ್ಲಿ ಬಂಧಿಸಿತ್ತು. ಅದರ ಬಳಿಕ ಅಬಕಾರಿ ನೀತಿ ಹಗರಣದಲ್ಲಿ ಕೇಂದ್ರ ಸಂಸ್ಥೆಗಳು ಸಂಜಯ್ ಸಿಂಗ್ ಅವರಿಗೆ ಆಘಾತ ನೀಡಿವೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಸಿಂಗ್ ಆಪ್ತ ಸಿಬ್ಬಂದಿ ಮತ್ತು ಅವರೊಂದಿಗೆ ಸಂಬಂಧ ಹೊಂದಿರುವವರನ್ನು ಈ ಹಿಂದೆ ಇಡಿ ವಿಚಾರಣೆ ನಡೆಸಿತ್ತು. ದಾಳಿ ಬಗ್ಗೆ ಮಾತನಾಡಿರುವ ಆಪ್ ವಕ್ತಾರೆ ರೀನಾ ಗುಪ್ತಾ, ಸಂಜಯ್ ಸಿಂಗ್ ಅವರು ಪ್ರಧಾನಿ ಮೋದಿ ಮತ್ತು ಅದಾನಿ ವಿಷಯದ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದರಿಂದ ಅವರ ನಿವಾಸದ ಮೇಲೆ ದಾಳಿ ನಡೆಸಲಾಗುತ್ತಿದೆ.

ಆಭರಣ ಮಳಿಗೆ, ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ

2021ರಲ್ಲಿ ದಿಲ್ಲಿ ಸರ್ಕಾರ ಅಬಕಾರಿ ನೀತಿ ರೂಪಿಸಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಲಿಕ್ಕರ್ ನೀತಿಗೆ ಸಂಬಂಧಿಸಿದಂತೆ ಆಗಲೇ ಸಾವಿರಾರು ಕೋಟಿ ರೂ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ವಿಚಾರವಾಗಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಎರಡೂ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡಿವೆ. ಇದೇ ಪ್ರಕರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡ ಏಪ್ರಿಲ್‌ನಲ್ಲಿ ಸುಮಾರು 9 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು.

ಅಬಕಾರಿ ನೀತಿಯನ್ನು ರೂಪಿಸುವುದರಲ್ಲಿ ಲಿಕ್ಕರ್ ಕಂಪೆನಿಗಳು ಭಾಗಿಯಾಗಿದ್ದವು. ಇದರ ಪ್ರಕಾರ, ಸಂಸ್ಥೆಗಳಿಗೆ ಶೇ 12ರಷ್ಟು ಲಾಭ ದೊರಕುವಂತೆ ಮಾಡಲಾಗಿತ್ತು. ‘ಸೌತ್ ಗ್ರೂಪ್’ ಎಂದು ಕರೆಯಲಾಗಿರುವ ವ್ಯಕ್ತಿಗಳ ಗುಂಪು ಲಾಬಿ ನಡೆಸಲು ಕಿಕ್ ಬ್ಯಾಕ್ ಕೂಡ ನೀಡಿತ್ತು. ಶೇ 12ರ ಲಾಭದಲ್ಲಿ ಶೇ 6ರಷ್ಟನ್ನು ಮಧ್ಯವರ್ತಿಗಳ ಮುಖಾಂತರ ರಾಜಕಾರಣಿಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.

RELATED ARTICLES

Latest News