Friday, May 3, 2024
Homeರಾಜಕೀಯಅತ್ತೂ ಕರೆದು ಕೊನೆಗೂ ಅಧ್ಯಕ್ಷರ ನೇಮಕ ಮಾಡಿದ್ದಾರೆ : ಶೆಟ್ಟರ್ ಲೇವಡಿ

ಅತ್ತೂ ಕರೆದು ಕೊನೆಗೂ ಅಧ್ಯಕ್ಷರ ನೇಮಕ ಮಾಡಿದ್ದಾರೆ : ಶೆಟ್ಟರ್ ಲೇವಡಿ

ಬೆಂಗಳೂರು, ನ.11- ಪಕ್ಷದ ರಾಜ್ಯಾಧ್ಯಕ್ಷರ ನೇಮಕದಲ್ಲಿ ಬಿಜೆಪಿ ಹೈಕಮಾಂಡ್ ವಿಫಲವಾಗಲಿದೆ. ಆರು ತಿಂಗಳಿನಿಂದ ಖಾಲಿ ಇದ್ದ ಹುದ್ದೆಗೆ ಅತ್ತೂ ಕರೆದು ನೇಮಕ ಮಾಡಿಸಿಕೊಂಡಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇತ್ತು. ಇಷ್ಟು ದಿನ ಯಾಕೆ ನೇಮಕ ಮಾಡಲಿಲ್ಲ. ಈ ಅವಯಲ್ಲಿ ತಳಮಟ್ಟದಲ್ಲಿ ಏನಾಗಿದೆ ಎಂದು ಕಾರ್ಯಕರ್ತರನ್ನು ಕೇಳಿದರೆ ಗೋತ್ತಾಗುತ್ತದೆ.ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಣೆ ಬರಹ ಗೊತ್ತಾಗಿದೆ. ಈಗ ಎಷ್ಟೇ ರಿಪೇರಿ ಮಾಡಿದರೂ ಸರಿ ಹೋಗುವುದಿಲ್ಲ ಎಂದರು.

ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗಳಿಸಿ ಬಲಾಢ್ಯವಾಗಿದೆ. ಗಟ್ಟಿಯಾದ, ಉತ್ತಮ ಆಡಳಿತ ನೀಡುತ್ತಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿದೆ. ಪಂಚಖಾತ್ರಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗುತ್ತಿವೆ. ಅವುಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪರಿಣಾಮದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 10 ರಿಂದ 12 ಸ್ಥಾನ ಗೆಲ್ಲಲಿದೆ, ಸಂದರ್ಭಾನುಸಾರ 20ಕ್ಕೆ ಹೋಗಬಹುದು ಎಂದರು.

ಬಿಜೆಪಿಯ 12 ಸಂಸದರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವದ್ಧಂತಿಯ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ. ವಿಜೆಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದರಿಂದ ರಾಜಕಾರಣದಲ್ಲಾಗುವ ಪರಿಣಾಮಗಳನ್ನು ಕಾದು ನೋಡಬೇಕಿದೆ. ತಾವು ಬಿಜೆಪಿ ಬಿಟ್ಟು ಬಂದಿದ್ದರಿಂದ ಅದರ ನಷ್ಟ ಸರಿ ತೂಗಿಸಲು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ನಾನು ಹೇಳುವುದಿಲ್ಲ. ನನ್ನ ಬಗ್ಗೆ ನಾನು ಹೇಳಿಕೊಳ್ಳುವುದಿಲ್ಲ ಎಂದರು.

ಆರು ತಿಂಗಳಿನಿಂದ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿಧಾನಮಂಡಲಗಳ ಉಭಯ ಸದನಗಳ ವಿರೋಧ ಪಕ್ಷದ ನಾಯಕರ ಹುದ್ದೆಗಳು ಖಾಲಿ ಇದ್ದವು. ಡಿಸೆಂಬರ್ 4ರಿಂದ ಬೆಳಗಾವಿ ಅವೇಶನ ಶುರುವಾಗಲಿದೆ. ಆ ವೇಳೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆಯಾಗಬೇಕು, ಇಲ್ಲವಾದರೆ ಮುಜುಗರ ಅನುಭವಿಸಬೇಕಾಗುತ್ತದೆ. ಮುಂದಿನ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಡೆಸಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಅದನ್ನು ಕಾದು ನೋಡುತ್ತೇವೆ ಎಂದರು.

ಕಾಂತರಾಜು ವರದಿಯ ಬಗ್ಗೆ ವಾದ ವಿವಾದಗಳಿವೆ, ಸಮಗ್ರ ಪರಿಶೀಲನೆ ನಡೆಯಬೇಕು , ಸರ್ಕಾರ ಯೋಗ್ಯ ನಿರ್ಧಾರ ತೆಗೆದುಕೊಳ್ಳಬೇಕು ಎಂದ ಅವರು, ಆಪರೇಷನ್ ಕಮಲ ನಡೆಸುತ್ತೇವೆ, ಮುಂದಿನ ಜನವರಿ ವೇಳೆಗೆ ಸರ್ಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಹಿಂದೆ ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಮಾಡಿ ಏನಾಗಿದೆ ಎಂದು ಗೊತ್ತಿದೆ.

ನ.15ಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಪದಗ್ರಹಣ

ಮಧ್ಯ ಪ್ರವೇಶದಲ್ಲಿ ಆಪರೆಷನ್ ಕಮಲ ಮಾಡಿದರು. ರಾಜಸ್ಥಾನದಲ್ಲಿ ಆಪರೇಷನ್ ಮಾಡಲು ಹೋಗಿ ಕೈ ಸುಟ್ಟುಕೊಂಡರು. ಕರ್ನಾಟದಲ್ಲಿ 40-50 ಶಾಸಕರನ್ನು ಸೆಳೆದುಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿಯವರಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಮೊದಲು ಬಿಜೆಪಿಯನ್ನು ಸರಿಯಾಗಿಟ್ಟುಕೊಳ್ಳಲಿ, ಕಾಂಗ್ರೆಸ್ ಸರ್ಕಾರ ಕೆಡವುತ್ತೇವೆ ಎಂದುಕೊಂಡಿದ್ದರೆ ಅದು ಸಾಧ್ಯವಾಗುವುದಿಲ್ಲ ಎಂದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದೆ. ನನಗಿರುವ ಮಾಹಿತಿ ಪ್ರಕಾರ ಮಧ್ಯಪ್ರದೇಶ, ತೆಲಂಗಾಣ, ಚತ್ತೀಸ್ಗಡ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಜಸ್ಥಾನದಲ್ಲಿ ಪೈಪೊಟಿ ಇದೆ. ಒಳ್ಳೆಯ ಫಲಿತಾಂಶವಂತೂ ಬರುತ್ತದೆ. ಇಂಡಿಯಾ ಮೈತ್ರಿಕೂಡದಲ್ಲಿ ಸ್ಥಾನ ಹಂಚಿಕೆ ಸಂದರ್ಭದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿರುತ್ತವೆ. ಚುನಾವಣೆ ಕಾಲಕ್ಕೆ ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ಅನಗತ್ಯ. ಹೈಕಮಾಮಡ್ ಯಾವ ರೀತಿಯ ಹೇಳಿಕೆಯನ್ನು ನೀಡಿಲ್ಲ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಉಳಿದ ಚರ್ಚೆಗಳು ಅನಗತ್ಯ. ಯಾರೋ ಒಬ್ಬರು ಹೇಳಿದಕ್ಕೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದರು. ಬಿಜೆಪಿಯ ಶಾಸಕ ಚಿಕ್ಕನಗೌಡರು ದೀಪಾವಳಿ ಹಬ್ಬದ ನಂತರ ರಾಜಕೀಯ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರೊಂದಿಗೆ ಭೇಟಿ ಮಾಡಿಸಿದ್ದೇನೆ. ಮುಂದಿನ ನಿರ್ಧಾರವನ್ನು ಕಾದು ನೋಡುತ್ತಿದ್ದೇವೆ ಎಂದರು.

RELATED ARTICLES

Latest News