Sunday, May 5, 2024
Homeರಾಜ್ಯಜನಾರ್ದನ ರೆಡ್ಡಿ ಪುನಃ ಬಿಜೆಪಿಗೆ ಕರೆತರಲು ಮುಂದುವರೆದ ಯತ್ನ

ಜನಾರ್ದನ ರೆಡ್ಡಿ ಪುನಃ ಬಿಜೆಪಿಗೆ ಕರೆತರಲು ಮುಂದುವರೆದ ಯತ್ನ

ಬೆಂಗಳೂರು,ಮಾ.2- ಮಾಜಿ ಸಚಿವ, ಗಂಗಾವತಿ ಶಾಸಕ ಜನಾದರ್ನ ರೆಡ್ಡಿ ಅವರನ್ನು ಪುನಃ ಬಿಜೆಪಿಗೆ ಕರೆತರುವ ಪ್ರಯತ್ನಗಳು ಜೋರಾಗಿಯೇ ನಡೆಯುತ್ತಿವೆ. ಮಾಜಿ ಸಚಿವ ಶ್ರೀರಾಮುಲು ತಮ್ಮ ಆಪ್ತ ಸ್ನೇಹಿತನನ್ನು ಮರಳಿ ಮನೆಗೆ ಕರೆತರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದು, ಈ ವಿಚಾರವಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಜೊತೆಯೂ ಮಾತುಕತೆ ನಡೆಸಿದ್ದಾರೆ.

ಜನಾರ್ದನ ರೆಡ್ಡಿ ಬಿಜೆಪಿಗೆ ಬಂದರೆ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂದಿದ್ದಾರೆ. ಆದರೆ, ಜನಾರ್ದನ ರೆಡ್ಡಿ ನಡೆ ಇನ್ನು ನಿಗೂಢವಾಗಿದೆ. ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ ಜನಾರ್ಧನ ರೆಡ್ಡಿ, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ರ್ಪಧಿಸಿ ಗೆದ್ದಿರುವುದರ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದಾರೆ. ಈ ಹಿನ್ನೆಲೆ ಲೋಕಸಭಾ ಚುನಾವಣೆಯಲ್ಲೂ ಜನಾಧರ್ನ ರೆಡ್ಡಿ ಪ್ರಭಾವ ಬೀರಿದರೆ ಕಷ್ಟವಾಗುತ್ತದೆ ಎಂದು ಜನಾರ್ಧನ ರೆಡ್ಡಿ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲು ತೆರೆಮರೆಯ ಪ್ರಯತ್ನಗಳು ನಡೆಯುತ್ತಲೇ ಇವೆ.

ಕೆಲ ದಿನಗಳ ಹಿಂದಷ್ಟೇ ಶ್ರೀರಾಮುಲು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಆಗ ಜನಾರ್ಧನ ರೆಡ್ಡಿ ಬಗ್ಗೆ ಚರ್ಚೆಯಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಜನಾರ್ಧನ ರೆಡ್ಡಿ ಜನಪ್ರಿಯ ನಾಯಕ. ಅವರು ಪಕ್ಷಕ್ಕೆ ವಾಪಸ್ ಬಂದರೆ ಬಿಜೆಪಿಗೆ ಬಲ ಬರಲಿದೆ. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಮೈಸೂರಿಗೆ ಅಮಿತ್ ಶಾ ಆಗಮಿಸಿದಾಗಲೂ ಜನಾರ್ಧನ ರೆಡ್ಡಿ ಬಗ್ಗೆ ಚರ್ಚೆಯಾಗಿದೆ. ಶ್ರೀರಾಮುಲು ಅವರು ಪ್ರತಿ ಅವಕಾಶದಲ್ಲೂ ತಮ್ಮ ಆಪ್ತ ಸ್ನೇಹಿತನನ್ನು ಮರಳಿ ಪಕ್ಷಕ್ಕೆ ಕರೆತರಲು ಶ್ರಮಪಡುತ್ತಿರುವುದು ಕಂಡುಬರುತ್ತಿದೆ.

ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಜನಾಧರ್ನ ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಯತ್ನಗಳಿಗೆ ವೇಗ ಸಿಕ್ಕಿತ್ತು. ಆದರೆ ಜನಾಧರ್ನ ರೆಡ್ಡಿ ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ, ಬೇಕಿದ್ದರೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಕೆಲ ದಿನಗಳ ಹಿಂದೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ಹಾಕುವ ಮೂಲಕ ಜನಾರ್ಧನ ರೆಡ್ಡಿ ಎಲ್ಲರನ್ನು ಅಚ್ಚರಿಗೊಳಪಡಿಸಿದ್ದರು. ಈ ಮೂಲಕ ಬಿಜೆಪಿ ಕಡೆ ನನ್ನ ನಡೆಯಿಲ್ಲ ಎಂಬುದನ್ನು ರೆಡ್ಡಿ ಸ್ಪಷ್ಟಪಡಿಸಿದ್ದರು.

ಬಿಜೆಪಿ ಸೇರ್ಪಡೆಗೆ ಹಿಂದೇಟು ಏಕೆ?:
ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ತಮಗೆ ಟಿಕೆಟ್ ನೀಡಲಿಲ್ಲ ಎಂಬ ಸಿಟ್ಟು ಜನಾಧರ್ನ ರೆಡ್ಡಿಯವರಿಗಿದೆ. ಬಿಜೆಪಿ ಪರ ಒಲವು ಹೊಂದಿದ್ದರು ಕೂಡ ಟಿಕೆಟ್ ನಿರಾಕರಿಸಿದ ಕೇಂದ್ರದ ನಾಯಕರೇ ತಮ್ಮನ್ನು ಸಂಪರ್ಕಿಸಲಿ ಎನ್ನುವ ಇರಾದೆಯಲ್ಲಿ ಜನಾರ್ದನ ರೆಡ್ಡಿ ಇದ್ದಾರೆ. ಈಗಾಗಲೇ ಎಲ್ಲರ ಕಡೆಯಿಂದಲೂ ವಸ್ತುಚಿತ್ರಣವನ್ನು ಪಡೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನಾಧರ್ನ ರೆಡ್ಡಿ ಅವರನ್ನು ಸಂಪರ್ಕಿಸುವ ಸಾಧ್ಯತೆ ಇದೆ. ಅದಾದ ಬಳಿಕ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

ರೆಡ್ಡಿ-ಶ್ರೀರಾಮುಲು ಸ್ನೇಹ!
ಕರ್ನಾಟಕ ರಾಜಕೀಯದಲ್ಲಿ ಅತ್ಯುತ್ತಮ ಸ್ನೇಹಿತರೆಂದರೆ ಅದು ಶ್ರೀರಾಮುಲು ಹಾಗೂ ಜನಾಧರ್ನ ರೆಡ್ಡಿ ಎಂದು ಹೇಳಲಾಗುತ್ತಿತ್ತು. ಆದರೆ, ವಿಧಾನಸಭಾ ಚುನಾವಣೆ ವೇಳೆ ಕೆಲ ಕಾರಣಗಳಿಗೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಈ ಹಿನ್ನೆಲೆ ಇಬ್ಬರು ಅಂತರ ಕಾಯ್ದುಕೊಂಡಿದ್ದಾರೆ. ಶ್ರೀರಾಮುಲು ಅವರೇ ಆಸಕಿವಹಿಸಿ ತಮ್ಮ ಸ್ನೇಹಿತನನ್ನು ಬಿಜೆಪಿಗೆ ವಾಪಸ್ ಕರೆತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಜನಾರ್ಧನ ರೆಡ್ಡಿ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ.

RELATED ARTICLES

Latest News