Tuesday, May 14, 2024
Homeಬೆಂಗಳೂರು1ಕೆ.ಜಿ ಆಭರಣ ಕಳ್ಳತನ ಮಾಡಿದ್ದ ಸೇಲ್ಸ್‍ಮ್ಯಾನ್ ಸೇರಿ ಇಬ್ಬರ ಬಂಧನ

1ಕೆ.ಜಿ ಆಭರಣ ಕಳ್ಳತನ ಮಾಡಿದ್ದ ಸೇಲ್ಸ್‍ಮ್ಯಾನ್ ಸೇರಿ ಇಬ್ಬರ ಬಂಧನ

ಬೆಂಗಳೂರು,ಅ.11- ಜ್ಯುವೆಲರಿ ಅಂಗಡಿಯೊಂದರಲ್ಲಿ ಸೇಲ್ಸ್‍ಮ್ಯಾನ್ ಕೆಲಸಕ್ಕೆ ಸೇರಿಕೊಂಡು ಮಾಲೀಕರ ನಂಬಿಕೆಗಳಿಸಿ ನಂತರ ಸಹಚರರೊಂದಿಗೆ ಸೇರಿಕೊಂಡು ಚಿನ್ನಾಭರಣ ದರೋಡೆಯಾಗಿದೆ ಎಂದು ನಾಟಕವಾಡಿ 1ಕೆ.ಜಿ 262 ಗ್ರಾಂ ಆಭರಣಗಳನ್ನು ಕಳ್ಳತನ ಮಾಡಿದ್ದ ಸೇಲ್ಸ್‍ಮ್ಯಾನ್ ಹಾಗೂ ಮತ್ತೊಬ್ಬ ಅಂತರ್‍ರಾಜ್ಯ ಕಳ್ಳನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಲಸೂರು ಗೇಟ್ ವ್ಯಾಪ್ತಿಯ ಜ್ಯುವೆಲರಿ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಯುವಕ ಕೆಲಸ ಮಾಡಿಕೊಂಡಿದ್ದು, ನಂತರದ ದಿನಗಳಲ್ಲಿ ಮಾಲೀಕರ ನಂಬಿಕೆ ಗಳಿಸಿದ್ದಾನೆ. ಸೆ.28ರಂದು ಆಂಧ್ರಪ್ರದೇಶದ ನಲ್ಲೂರಿನಲ್ಲಿರುವ ಮುಖೇಶ್ ಮತ್ತು ಶುಭಂ ಗೋಲ್ಡ್ ಜ್ಯುವೆಲರಿ ಅಂಗಡಿಯ ಮಾಲೀಕರಿಗೆ 1.ಕೆಜಿ 262 ಗ್ರಾಂ ಚಿನ್ನಾಭರಣಗಳನ್ನು ಕೊಟ್ಟು ಬರುವಂತೆ ಆತನಿಗೆ ಮಾಲೀಕರು ತಿಳಿಸಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭಿನ್ನಮತದ ಭೀತಿ

ಸೇಲ್ಸ್ ಮ್ಯಾನ್ ನಲ್ಲೂರಿಗೆ ಹೋಗಿ, ತನ್ನ ಸಹಚರರೊಂದಿಗೆ ಸೇರಿಕೊಂಡು ಆಭರಣಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ನಂತರ ಮೊಬೈಲ್ ಮುಖಾಂತರ ಮಾಲೀಕರಿಗೆ ಕರೆ ಮಾಡಿ ನಲ್ಲೂರಿನಲ್ಲಿ ದರೋಡೆ ಕೋರರು ಗನ್‍ಪಾಯಿಂಟ್ ಮಾಡಿ ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನಾಭರಣ ಇದ್ದ ಬ್ಯಾಗನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ತಿಳಿಸಿದ್ದಾನೆ.

ಈತನ ಮಾತನ್ನು ನಂಬಿದ ಮಾಲೀಕ ಸೇಲ್ಸ್‍ಮ್ಯಾನ್‍ನನ್ನು ನಲ್ಲೂರಿನಿಂದ ವಾಪಸ್ಸು ಕರೆದುಕೊಂಡು ಬಂದು ಅ.2ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅಂಗಡಿಯ ಸೇಲ್ಸ್ ಮ್ಯಾನ್ ಮೇಲೆಯೇ ಅನುಮಾನಗೊಂಡು ಈತನನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಘಟನೆಯ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

ನಂತರ ಸೇಲ್ಸ್‍ಮ್ಯಾನ್‍ನನ್ನು 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದು, ಆತ ನೀಡಿದ ಮಾಹಿತಿ ಮೇರೆಗೆ ರಾಜಸ್ತಾನಕ್ಕೆ ಹೋಗಿ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು, ಆತನಿಂದ 1 ಕೆ.ಜಿ, 262 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 75ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಚೆನ್ನೈನಿಂದ ಅಹಮದಾಬಾದ್‍ಗೆ ಶುಭ್‍ಮನ್ ಗಿಲ್ ಶಿಫ್ಟ್

ಈ ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮತ್ತಿಬ್ಬರ ಆರೋಪಿಗಳ ಬಗ್ಗೆ ತನಿಖೆ ಮುಂದುವರೆದಿದೆ. ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶೇಖರ್, ಹಲಸೂರು ಗೇಟ್ ಎಸಿಪಿ ಶಿವನಂದ ಚಲವಾದಿ ಅವರ ಮಾರ್ಗದರ್ಶನದಲ್ಲಿ, ಇನ್ಸ್‍ಪೆಕ್ಟರ್, ಹನುಮಂತ ಭಜಂತ್ರಿ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿ ತಳವು ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.

RELATED ARTICLES

Latest News