Saturday, July 27, 2024
Homeಮನರಂಜನೆನಟ ಚೇತನ್‌ ಚಂದ್ರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ನಟ ಚೇತನ್‌ ಚಂದ್ರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಬೆಂಗಳೂರು, ಮೇ 13- ಕಾರಿನಲ್ಲಿ ಬರುತ್ತಿದ್ದ ನಟ ಚೇತನ್‌ ಚಂದ್ರ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋದ ಕಿಡಿಗೇಡಿಗಳು ವಿನಾಕಾರಣ ಜಗಳವಾಡಿ ಹಲ್ಲೆ ನಡೆಸಿ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕಗ್ಗಲಿಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ 8.30 ರ ಸುಮಾರಿನಲ್ಲಿ ದೇವಸ್ಥಾನಕ್ಕೆ ಹೋಗಿ ಚೇತನ್‌ ಚಂದ್ರ ಅವರು ಕಾರಿನಲ್ಲಿ ಕನಕಪುರದಿಂದ ಬೆಂಗಳೂರಿಗೆ ಬರುತ್ತಿದ್ದರು. ಚೇತನ್‌ ಅವರ ಜೊತೆ ಮೇಕಪ್‌ ಮ್ಯಾನ್‌ ಸಹ ಇದ್ದರು. ಈ ವೇಳೆ 20 ಮಂದಿ ಕಿಡಿಗೇಡಿಗಳು ಬೈಕ್‌ಗಳಲ್ಲಿ ಚೇತನ್‌ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಕಗ್ಗಲಿಪುರದ ಮಯೂರ ಬೇಕರಿ ಬಳಿ ಕಾರನ್ನು ಅಡ್ಡ ಗಟ್ಟಿ, ನಮ ಬೈಕನ್ನು ತಾಗಿಸಿಕೊಂಡು ಹೋಗುತ್ತಿದ್ದಿಯಾ ಎಂದು ಕ್ಯಾತೆ ತೆಗೆದಿದ್ದಾರೆ.

20 ಮಂದಿಯ ಪೈಕಿ 5 ಮಂದಿ ವಿನಾಕಾರಣ ಜಗಳವಾಡಿ ಕಾರಿನ ಗಾಜನ್ನು ಒಡೆದು ದಾಂಧಲೆ ನಡೆಸಿದ್ದಲ್ಲದೇ ಚೇತನ್‌ ಅವರು ಧರಿಸಿದ್ದ ಚಿನ್ನದ ಸರ ಕಿತ್ತುಕೊಂಡು ಕೈಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದಾಗಿ ಚೇತನ ಅವರ ಮೂಗಿಗೆ ಬಲವಾದ ಪೆಟ್ಟು ಬಿದ್ದಿದ್ದು ರಕ್ತಸ್ರಾವವಾಗಿದೆ.

ಈ ಬಗ್ಗೆ ಅವರು ಕಗ್ಗಲಿಪುರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದು, ಘಟನೆಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಚೇತನ್‌ ಚಂದ್ರು ಅವರು ಪಿಯುಸಿ, ಪ್ರೇಮಿಸಂ, ರಾಜಧಾನಿ, ಕುಂಬರಾಶಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

RELATED ARTICLES

Latest News