Saturday, July 27, 2024
Homeರಾಜ್ಯಲೋಕಸಭಾ ಚುನಾವಣೆಗೆ ಕೈ ಸಜ್ಜು , ಅಭ್ಯರ್ಥಿಗಳ ಆಯ್ಕೆ ಕಸರತ್ತು

ಲೋಕಸಭಾ ಚುನಾವಣೆಗೆ ಕೈ ಸಜ್ಜು , ಅಭ್ಯರ್ಥಿಗಳ ಆಯ್ಕೆ ಕಸರತ್ತು

ಬೆಂಗಳೂರು,ಜ.18- ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ರಾಜ್ಯ ಚುನಾವಣಾ ಸಮಿತಿಯ ಸಭೆ ನಾಳೆ ನಡೆಯಲಿದ್ದು, ಕಾಂಗ್ರೆಸ್ ರಣೋತ್ಸಾಹದಿಂದ ಪೂರ್ವ ತಯಾರಿಗಳಿಗೆ ಚಾಲನೆ ನೀಡಲಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ನಾನಾ ರೀತಿಯ ಕಸರತ್ತುಗಳನ್ನು ನಡೆಸಲಾಗುತ್ತಿದೆ.

ಈಗಾಗಲೇ ಸಚಿವರುಗಳ ನೇತೃತ್ವದಲ್ಲಿ ವೀಕ್ಷಕರ ಸಮಿತಿಗಳನ್ನು ರಚಿಸಿ ಜಿಲ್ಲಾಮಟ್ಟದಲ್ಲಿ ಸಭೆಗಳನ್ನು ನಡೆಸುವ ಮೂಲಕ ಕೆಲವು ಕ್ಷೇತ್ರಗಳ ವರದಿ ಪಡೆದುಕೊಳ್ಳಲಾಗಿದೆ. ಆದರೆ ಬಹುತೇಕ ಸಚಿವರುಗಳು ಈವರೆಗೂ ಜಿಲ್ಲಾಮಟ್ಟದಲ್ಲಿ ವೀಕ್ಷಕರ ಸಭೆಗಳನ್ನು ನಡೆಸಿಲ್ಲ. ವಸತಿ ಸಚಿವ ಜಮೀರ್ ಅಹಮ್ಮದ್ಖಾನ್ ರಾಜ್ಯ ಚುನಾವಣೆಗೆ ಮುನ್ನಾದಿನವಾದ ಇಂದು ಕೇಂದ್ರ ಲೋಕಸಭಾ ಕ್ಷೇತ್ರದ ಮುಖಂಡರ ಜೊತೆ ಸಮಾಲೋಚನಾ ಸಭೆ ನಡೆಸಿದ್ದಾರೆ.

ಬೆಂಗಳೂರು ಉತ್ತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈವರೆಗೂ ಸಭೆಗಳು ನಡೆದಿಲ್ಲ. ವೀಕ್ಷಕರ ವರದಿಗಳು ಪಕ್ಷಕ್ಕೆ ಸಲ್ಲಿಕೆಯಾಗಿಲ್ಲ. ಸಚಿವರ ನಿರ್ಲಕ್ಷ್ಯ ಒಂದು ಕಡೆಯಾದರೆ, ಪರ್ಯಾಯವಾಗಿ ಹೈಕಮಾಂಡ್ ಬೇರೆ ಮಾರ್ಗಗಳ ಮೂಲಕ ಚುನಾವಣಾ ಸಿದ್ಧತೆಗಳಿಗೆ ಮುಂದಾಗಿದೆ. ಈಗಾಗಲೇ 2 ಬಾರಿ ಸಂಪುಟದ ಸಚಿವರನ್ನು ದೆಹಲಿಗೆ ಕರೆಸಿಕೊಂಡು ಸಮಾಲೋಚನೆ ನಡೆಸಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಚಿವರ ಸಭೆಯಲ್ಲಿ ವೀಕ್ಷಕರ ಸಮಿತಿಗಳು ವರದಿ ನೀಡದೇ ಇದ್ದರೂ ಅದರ ಬಗ್ಗೆ ಹೆಚ್ಚು ಆದ್ಯತೆ ನೀಡದೆ ಈಗಾಗಲೇ ಚುನಾವಣಾ ಸಂಯೋಜಕರಾಗಿ ನಿಯೋಜನೆಗೊಂಡಿರುವ ಸಚಿವರು ಕ್ಷೇತ್ರಗಳಲ್ಲಿ ಸಮಾಲೋಚನಾ ಸಭೆ ನಡೆಸಬೇಕು. ಬೂತ್ ಸಮಿತಿಗಳು, ಪ್ರಚಾರ ಸಮಿತಿಗಳ ರಚನೆ ಸೇರಿದಂತೆ ಹಲವು ಚಟುವಟಿಕೆಗಳಿಗೆ ಚಾಲನೆ ನೀಡಬೇಕು.

ಪರ್ಯಾಯ ಪೀಠಾರೋಹಣ ಮಾಡಿದ ಸುಗುಣೇಂದ್ರ ತೀರ್ಥರು

ಟಿಕೆಟ್ ಆಕಾಂಕ್ಷಿಗಳ ನಡುವೆ ಸಮನ್ವಯತೆ ಮತ್ತು ಒಮ್ಮತ ಮೂಡಿಸಬೇಕು. ಬಂಡಾಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಬೇರೆ ಪಕ್ಷಗಳಿಂದ ಆಗಮಿಸುವ ಮುಖಂಡರು, ಕಾರ್ಯಕರ್ತರನ್ನು ಪಕ್ಷದ ಹಿರಿಯ ನಾಯಕರೊಂದಿಗಿನ ಸಮಾಲೋಚನೆಯೊಂದಿಗೆ ಬರಮಾಡಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.ಈಗಾಗಲೇ ಸಚಿವರ ವೀಕ್ಷಕರ ಸಮಿತಿಯ ಆಯ್ದ ಕ್ಷೇತ್ರಗಳ ವರದಿಗಳ ಜೊತೆಗೆ ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಂದಲೂ ಆಕಾಂಕ್ಷಿ ಗಳ ಪಟ್ಟಿಯನ್ನು ಕೆಪಿಸಿಸಿ ಪಡೆದುಕೊಂಡಿದೆ. ಹೀಗಾಗಿ ಅದರ ಆಧಾರದ ಮೇಲೆ ನಾಳೆ ರಾಜ್ಯ ಚುನಾವಣಾ ಸಮಿತಿ ಚರ್ಚೆ ನಡೆಸಲಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸಭೆಗೆ ಆಗಮಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಚರ್ಚೆ ನಡೆಸಿದ ಬಳಿಕ ಸಂಭವನೀಯರ ಪಟ್ಟಿಯನ್ನು ಅಧಿಕೃತವಾಗಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ. ಅಲ್ಲಿ ಈ ತಿಂಗಳ ಅಂತ್ಯದಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸುವ ಸಾಧ್ಯತೆಯಿದೆ.

ಮಾರ್ಚ್ ಎರಡನೇ ವಾರದಲ್ಲಿ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆಗೆ ದಿನಾಂಕಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಆ ವೇಳೆಗೆ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ಕಾಂಗ್ರೆಸ್ ಎಲ್ಲಾ ರೀತಿಯ ತಯಾರಿಗಳನ್ನು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News