Friday, May 3, 2024
Homeಇದೀಗ ಬಂದ ಸುದ್ದಿಕಾಂಗ್ರೆಸ್ ಖಾತೆ ಜಪ್ತಿ ಮಾಡಿ ಬಿಜೆಪಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ : ಖರ್ಗೆ

ಕಾಂಗ್ರೆಸ್ ಖಾತೆ ಜಪ್ತಿ ಮಾಡಿ ಬಿಜೆಪಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ : ಖರ್ಗೆ

ದೆಹಲಿ,ಮಾ.21- ಲೋಕಸಭಾ ಚುನಾವಣೆ ಘೋಷಣೆಯಾಗುವ ಮೂರು ವಾರಗಳ ಮೊದಲು ಕಾಂಗ್ರೆಸ್ ಪಕ್ಷದ 11 ಖಾತೆಗಳನ್ನು ಜಪ್ತಿ ಮಾಡುವ ಮೂಲಕ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ನ ಖರ್ಗೆ, ಕಾಂಗ್ರೆಸ್ ಸಂಸದೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಖಜಾಂಚಿ ಅಜಯ್ ಮಕೇನ್ ಸೇರಿದಂತೆ ಹಲವು ನಾಯಕರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಖರ್ಗೆಯವರು ಮಾತನಾಡಿ, ಭಾರತ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ. 18ನೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷಗಳಿಗೂ ಸಮಾನ ಸ್ಪರ್ಧೆಯ ವೇದಿಕೆ ಅಗತ್ಯವಿರುತ್ತದೆ. ಆದರೆ ಕೇಂದ್ರ ಸರ್ಕಾರ ಅಸಾಂವಿಧಾನಿಕವಾಗಿ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಚುನಾವಣಾ ಆಯೋಗಗಳನ್ನು ಏಕಸ್ವಾಮ್ಯವಾಗಿ ನಿಯಂತ್ರಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

ಕೇಂದ್ರ ಚುನಾವಣೆಯ ಚಂದಾ ವಸೂಲಿ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ. ಒಟ್ಟಾರೆ ಬಾಂಡ್ಗಳಲ್ಲಿ ಶೇ. 56 ರಷ್ಟು ಪಾಲನ್ನು ಬಿಜೆಪಿ ಪಡೆದಿದೆ. ಈ ಬಾಂಡ್ಗಳು ಅಸಾಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ. ಆಡಳಿತಾರೂಢ ಪಕ್ಷ ಅಧಿಕಾರ ದುರುಪಯೋಗಪಡಿಸಿಕೊಂಡು ಚಂದಾ ವಸೂಲಿ ಮಾಡಿರುವುದು ಆತಂಕಕಾರಿ ಮತ್ತು ನಾಚಿಕೆಗೇಡು ಎಂದು ಟೀಕಿಸಿದರು.

ಒಂದೆಡೆ ಬಿಜೆಪಿ ಚುನಾವಣಾ ಬಾಂಡ್ಗಳ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಿ ಚುನಾವಣೆ ನಡೆಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಮೇಲಿನ ಆಕ್ರಮಣವಲ್ಲ. ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಈ ಹಿಂದೆ ನೆಹರೂ ಕಾಲದಿಂದಲೂ ವಿಪಕ್ಷಗಳಿಗೆ ಚುನಾವಣೆಯಲ್ಲಿ ಸ್ರ್ಪಸಲು ಸಮಾನ ವೇದಿಕೆಯನ್ನು ಕಲ್ಪಿಸಲಾಗಿತ್ತು. ಇದೇ ಮೊದಲ ಬಾರಿಗೆ ಬಿಜೆಪಿ ಏಕಸ್ವಾಮ್ಯ ಸಾಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

ಸೋನಿಯಾಗಾಂಧಿ ಮಾತನಾಡಿ, ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಮೇಲೆ ಆರ್ಥಿಕ ದೌರ್ಜನ್ಯ ನಡೆಸುತ್ತಿದೆ. ಅಸಂಸದೀಯ ಮತ್ತು ಅಪ್ರಜಾಸತ್ತಾತ್ಮಕ ಕ್ರಮಗಳನ್ನು ಅನುಸರಿಸುತ್ತಿದೆ. ಚುನಾವಣಾ ಬಾಂಡ್ಗಳ ಹಗರಣ ಗಮನಾರ್ಹವಾಗಿದೆ ಎಂದು ಕಟಕಿಯಾಡಿದರು. ರಾಹುಲ್ ಗಾಂಧಿ ಮಾತನಾಡಿ, ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹಸಚಿವರು ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಿಮಿನಲ್ ಆ್ಯಕ್ಷನ್ ನಡೆಸುತ್ತಿದ್ದಾರೆ. ಆರ್ಥಿಕ ಮೂಲಗಳನ್ನು ಸ್ಥಗಿತಗೊಳಿಸಿದರೆ ಕುಟುಂಬಗಳು ಹಸಿವಿನಿಂದ ಸಾಯುತ್ತವೆ. ವ್ಯಾಪಾರ ನಶಿಸುತ್ತದೆ. ಅಂತಹುದೇ ತಂತ್ರಗಾರಿಕೆಯನ್ನು ಕಾಂಗ್ರೆಸ್ ವಿರುದ್ಧ ಅನುಸರಿಸಲಾಗುತ್ತಿದೆ. ನಮ್ಮ ಆರ್ಥಿಕ ಗುರುತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲವಾಗಿದೆ. ಅತಿ ದೊಡ್ಡ ವಿರೋಧ ಪಕ್ಷದ ವಿರುದ್ಧ ಇಷ್ಟೆಲ್ಲಾ ಅನ್ಯಾಯಗಳಾಗುತ್ತಿದ್ದರೂ ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳು ಮೌನವಾಗಿದೆ. ಬ್ಯಾಂಕ್ ಖಾತೆ ಜಪ್ತಿಯಿಂದಾಗಿ ನಮ್ಮ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿಲ್ಲ. ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಲಾಗುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಒಂದೆಡೆಯಿಂದ ಮತ್ತೊಂದೆಡೆ ಮುಖಂಡರ ಪ್ರಯಾಣಕ್ಕೆ ರೈಲ್ವೆ ಹಾಗೂ ವಿಮಾನದ ಟಿಕೆಟ್ಗಳನ್ನು ಖರೀದಿಸಲಾಗುತ್ತಿಲ್ಲ. ಕಾರ್ಯಕರ್ತರಿಗೂ ಸಹಾಯ ಮಾಡಲಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಖಜಾಂಚಿ ಅಜಯ್ ಮಕೇನ್ ಮಾತನಾಡಿ, ದೇಶದ ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆ ವಿನಾಯಿತಿ ಇದೆ. ಬಿಜೆಪಿ ಈವರೆಗೂ ಆದಾಯ ತೆರಿಗೆ ಪಾವತಿಸಿಲ್ಲ. 2017-18 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 210 ಕೋಟಿ ರೂ.ಗಳ ಹಣ ಸಂಗ್ರಹವಾಗಿದೆ ಎಂದು ಲೆಕ್ಕ ಹಾಕಲಾಗಿದೆ. ಒಟ್ಟಾರೆ ಸಂಗ್ರಹವಾಗಿರುವುದು 199 ಕೋಟಿ ರೂ., ಅದರಲ್ಲಿ ಪಕ್ಷದ ಸದಸ್ಯತ್ವ ಹಾಗೂ ಯುವ ಕಾಂಗ್ರೆಸ್ ಸದಸ್ಯತ್ವದ ಶುಲ್ಕ ಸೇರಿದೆ. 14.49 ಲಕ್ಷ ರೂ. ನಗದು ರೂಪದಲ್ಲಿ ಸ್ವೀಕರಿಸಲಾಗಿದೆ ಎಂಬ ಕಾರಣಕ್ಕೆ 2024ರ ಫೆ.13 ರಂದು ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿತ್ತು. ಒಟ್ಟು ಸಂಗ್ರಹದ ಹಣದಲ್ಲಿ ನಗದು ಸ್ವೀಕಾರದ ಪ್ರಮಾಣ ಶೇ. 0.07ರಷ್ಟು. ಇದಕ್ಕೆ ಶೇ. 106 ಪಟ್ಟು ದುಬಾರಿ ದಂಡ ವಿಧಿಸಲಾಗಿದೆ.

ಆದಾಯ ತೆರಿಗೆ ಇಲಾಖೆ ಕಾಯ್ದೆಯಲ್ಲಿ ದಂಡ ವಿಧಿಸಲು ಅವಕಾಶ ಇರುವುದು ಗರಿಷ್ಠ 10 ಸಾವಿರ ರೂ. ಮಾತ್ರ. ಆದರೆ ಆದಾಯ ತೆರಿಗೆ ಅಧಿಕಾರಿಗಳು 4 ಬ್ಯಾಂಕ್ಗಳಲ್ಲಿದ್ದ ಕಾಂಗ್ರೆಸ್ ಪಕ್ಷದ 11 ಖಾತೆಗಳನ್ನು ಜಪ್ತಿಗೊಳಿಸಿದ್ದಾರೆ ಮತ್ತು ಬ್ಯಾಂಕ್ ವ್ಯವಸ್ಥಾಪಕರನ್ನು ಬೆದರಿಸಿ 115 ಕೋಟಿ ರೂ.ಗಳನ್ನು ಬಲವಂತವಾಗಿ ಸರ್ಕಾರಕ್ಕೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

1993-94ನೇ ಸಾಲಿನಲ್ಲಿ ಸೀತಾರಾಮ್ ಕೇಸರಿ ಖಜಾಂಚಿಯಾಗಿದ್ದಾಗಿನ ವಹಿವಾಟಿಗೆ ಸಂಬಂಧಪಟ್ಟಂತೆ 31 ವರ್ಷಗಳ ಬಳಿಕ ಕಳೆದ ವಾರ ನೋಟಿಸ್ ನೀಡಲಾಗಿದೆ ಎಂದು ವಿವರಿಸಿದರು. ನಾವು ಕೇಂದ್ರ ಸರ್ಕಾರದ ಈ ಕ್ರಮವನ್ನು ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲೂ ಪ್ರಶ್ನೆ ಮಾಡಿದ್ದೇವೆ. ಜನತಾ ನ್ಯಾಯಾಲಯದಲ್ಲೂ ಪ್ರಸ್ತಾಪಿಸಿದ್ದೇವೆ ಎಂದು ಹೇಳಿದರು.

RELATED ARTICLES

Latest News