Saturday, July 27, 2024
Homeರಾಜಕೀಯಮೋದಿ ದುರ್ಬಲ ಮೈತ್ರಿ ಸರ್ಕಾರ 5 ವರ್ಷ ಪೂರೈಸುವುದು ಕಷ್ಟ : ಎಂ.ಬಿ.ಪಾಟೀಲ್‌

ಮೋದಿ ದುರ್ಬಲ ಮೈತ್ರಿ ಸರ್ಕಾರ 5 ವರ್ಷ ಪೂರೈಸುವುದು ಕಷ್ಟ : ಎಂ.ಬಿ.ಪಾಟೀಲ್‌

ಬೆಂಗಳೂರು, ಜೂ.8-ಪ್ರಧಾನಮಂತ್ರಿ ನರೇಂದ್ರಮೋದಿ ಮೈತ್ರಿ ಸರ್ಕಾರ ದುರ್ಬಲರಾಗಿದ್ದು, ಐದು ವರ್ಷ ಪೂರ್ಣಾವಧಿ ಸರ್ಕಾರ ನಡೆಯುವುದು ಕಷ್ಟಸಾಧ್ಯವಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು, ಬಿಹಾರದ ನಿತೀಶ್‌ಕುಮಾರ್‌ ಅವರ ಮೇಲೆ ಅವಲಂಬಿತರಾಗಬೇಕಿದೆ.

ನಿತೀಶ್‌ಕುಮಾರ್‌ ಅವರು ಯಾವಾಗ, ಯಾವ ಕ್ಷಣದಲ್ಲಿ ಬೇಕಾದರೂ ತಮ ನಿಲುವನ್ನು ಬದಲಾವಣೆ ಮಾಡುತ್ತಿರುತ್ತಾರೆ. ಹಾಗಾಗಿ ಸರ್ಕಾರದ ಅವಧಿ ಪೂರ್ಣಗೊಳಿಸುವುದು ಸುಲಭದ ವಿಚಾರ ಅಲ್ಲ ಎಂದರು.

ರಾಜಸ್ಥಾನ, ಮಹಾರಾಷ್ಟ್ರ, ಬಿಹಾರ ಸೇರಿದಂತೆ ಹಲವು ಕಡೆ ಬಿಜೆಪಿಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌‍ 9 ಸ್ಥಾನ ಪಡೆದುಕೊಂಡಿದ್ದು, ಇನ್ನೂ 5 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದ್ದರೂ ಸೋಲು ಕಂಡಿದ್ದೇವೆ. ಅದಕ್ಕೆ ಕಾರಣಗಳೇನು ಎಂಬುದು ಎಲ್ಲರಿಗೂ ಗೊತ್ತಿದೆ. ನಾಲ್ಕು ಗೋಡೆಗಳ ಮಧ್ಯೆ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ಶರಣ ಪ್ರಕಾಶ ಪಾಟೀಲರ ಹೆಸರು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸದ ಅವರು, ಅವರೊಬ್ಬ ಅಪ್ಪಟ ಪ್ರಾಮಾಣಿಕ ವ್ಯಕ್ತಿ. ಸ್ವಚ್ಛ ವ್ಯಕ್ತಿತ್ವ ಹೊಂದಿದ್ದಾರೆ ಎಂಬುದನ್ನು ನಾವು ಗರ್ವದಿಂದ ಹೇಳುತ್ತೇವೆ. ಕ್ರಿಯಾಶೀಲ ಸಚಿವರಾಗಿರುವ ಶರಣಪ್ರಕಾಶ್‌ ಪಾಟೀಲರು ಸಾಕ್ಷ್ಯ ನಾಶಪಡಿಸುವ ಮತ್ತು ಭ್ರಷ್ಟಾಚಾರ ನಡೆಸುವ ವ್ಯಕ್ತಿ ಅಲ್ಲ ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಅಪ್ಪಿತಪ್ಪಿಯೂ ಅವರ ಹೆಸರನ್ನು ಇದರಲ್ಲಿ ಥಳಕು ಹಾಕಬೇಡಿ ಎಂದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದನಾಬ್‌ ಅತ್ಯಂತ ಭ್ರಷ್ಟ ವ್ಯಕ್ತಿ. ಆತ ನಾಳೆ ನನ್ನ ಹೆಸರು ಬರೆಯಬಹುದು. ಆಗಲೂ ಪ್ರಶ್ನೆ ಕೇಳಲು ಸಾಧ್ಯವೇ? ಯಾವುದೋ ಚಾನಲ್‌ ಹೆಸರು ಬರೆದಿಟ್ಟರೆ, ಪ್ರಧಾನಿ ನರೇಂದ್ರ ಮೋದಿಯವರು ಮೌಖಿಕ ಸೂಚನೆ ನೀಡಿದ್ದರು ಎಂದರೆ ಅದನ್ನು ನಂಬಲಾಗುತ್ತದೆಯೇ? ಇದು ಒಂದು ಪಕ್ಷಕ್ಕೆ ಸೀಮಿತವಲ್ಲ. ಯಾವುದೇ ಪಕ್ಷಕ್ಕಾದರೂ ಎಚ್ಚರಿಕೆಯಿಂದ ಮಾತನಾಡಬೇಕು. ಸಿಕ್ಕಿಬಿದ್ದ ಭ್ರಷ್ಟರ ಮಾತುಗಳನ್ನು ನಂಬುವಾಗ ಯೋಚಿಸಬೇಕಾಗುತ್ತದೆ ಎಂದು ಹೇಳಿದರು.

ಬಹಳಷ್ಟು ನಿಗಮಗಳಲ್ಲಿ ಈ ರೀತಿ ಹಣ ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಗಳಿರುತ್ತಾರೆ. ನಮ ಇಲಾಖೆಯಲ್ಲೂ ಬಹಳಷ್ಟು ಲೋಪಗಳನ್ನು ನಾನೇ ಕಂಡುಹಿಡಿದಿದ್ದೇನೆ. ಅದು ಭ್ರಷ್ಟಾಚಾರ ಅಲ್ಲದೇ ಇರಬಹುದು, ಆದರೆ ಲೋಪಗಳಂತೂ ನಡೆದಿವೆ ಎಂದು ಹೇಳುವ ಮೂಲಕ ಸಚಿವ ಶರಣಪ್ರಕಾಶ್‌ ಪಾಟೀಲ್‌ ಪರವಾಗಿ ಬ್ಯಾಟಿಂಗ್‌ ಮಾಡಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಹಿನ್ನಡೆಯಾಗಿರುವ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ರಾಹುಲ್‌ಗಾಂಧಿ ಚರ್ಚೆ ನಡೆಸಿದ್ದಾರೆ.

ಜಾತಿ ಸಮೀಕರಣವಾಗಿರುವ ಬಗ್ಗೆ ರಣದೀಪ್‌ ಸಿಂಗ್‌ ಸುರ್ಜೇವಾಲ ಪ್ರಾಥಮಿಕ ವಿವರಣೆ ನೀಡಿದರು. ವಿಸ್ತೃತ ವರದಿ ತಯಾರಿಸುವಂತೆ ಹೈಕಮಾಂಡ್‌ ನಾಯಕರು ಸೂಚಿಸಿದ್ದಾರೆ ಎಂದರು. ರಾಜಕೀಯ ಭವಿಷ್ಯ ದೃಷ್ಟಿಯಿಂದಾಗಿ ಸೋಲಿನ ಆತಾವಲೋಕನ ನಡೆಸಲಾಗುವುದು, ಸೋಲುಗಳಿಗೆ ಕಾರಣ, ಲೋಪಗಳ ಬಗ್ಗೆ ಕಾರಣವನ್ನು ಪತ್ತೆ ಹಚ್ಚಿ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲು ಪ್ರಯತ್ನ ನಡೆಸಲಾಗುವುದು ಎಂದರು.

ಲೋಕಸಭೆ ಚುನಾವಣಾ ಹಿನ್ನೆಲೆಯಲ್ಲಿ ಸಚಿವರ, ಶಾಸಕರ ಮೌಲ್ಯಮಾಪನ ನಡೆಸುವ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ ಎಂದು ಹೇಳಿದ ಸಚಿವರು, ಕಾಂಗ್ರೆಸ್‌‍ ಪಕ್ಷಕ್ಕೆ ಸೋಲಾಗಿದೆ ಎಂಬ ಕಾರಣಕ್ಕೆ ಯಾವುದೇ ಒಂದು ಸಮುದಾಯಕ್ಕೆ ಅದನ್ನು ಹೊಣೆಯನ್ನಾಗಿಸಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍ ಗೆದ್ದಿದೆ. ಲಿಂಗಾಯತ ಸಮುದಾಯ ಬೆಂಬಲ ನೀಡಿದ್ದಕ್ಕಾಗಿಯೇ ಅಲ್ಲಿ ಗೆಲ್ಲಲು ಸಾಧ್ಯವಾಗಿದೆ. ಉಳಿದ ಕಡೆ ಹೆಚ್ಚು ಕಮಿ ಆಗಿರುವ ಬಗ್ಗೆ ಚರ್ಚೆಯಾಗಲಿದೆ ಎಂದು ಹೇಳಿದರು.

ಕರ್ನಾಟಕದ ಕಾಂಗ್ರೆಸ್‌‍ ಸರ್ಕಾರ ಮಹಾರಾಷ್ಟ್ರದ ಮಾದರಿಯಲ್ಲೇ ಪತನಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದ ಅಲ್ಲಿನ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿಕೆ ನೀಡಿದ್ದರು. ಆದರೆ ಮಹಾರಾಷ್ಟ್ರದಲ್ಲೇ ಅವರಿಗೆ ಜನಬೆಂಬಲ ಸಿಕ್ಕಿಲ್ಲ. ಸಾಕಷ್ಟು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ ಎಂದರು.

RELATED ARTICLES

Latest News