Thursday, May 2, 2024
Homeರಾಜ್ಯರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಸಾಧ್ಯತೆ ಇಲ್ಲ : ಸತೀಶ್ ಜಾರಕಿಹೊಳಿ

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಸಾಧ್ಯತೆ ಇಲ್ಲ : ಸತೀಶ್ ಜಾರಕಿಹೊಳಿ

ಬೆಂಗಳೂರು,ಫೆ.2- ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನವಾಗುವ ಸಾಧ್ಯತೆಗಳಿಲ್ಲ. ನಮ್ಮ ಮತ ನಮಗೆ, ಅವರ ಮತ ಅವರಿಗೆ ಬೀಳಲಿವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್‍ಗೆ 3, ಬಿಜೆಪಿ-ಜೆಡಿಎಸ್‍ಗೆ 1 ಸ್ಥಾನದ ಹಂಚಿಕೆಯಾಗಬಹುದು. ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಅಡ್ಡ ಮತದಾನವಾಗುವ ಆತಂಕ ಇಲ್ಲ. ಅಗತ್ಯವಾಗಿ ಲಕ್ಷ್ಮಣ ಸವದಿ ಹಾಗೂ ಇತರರ ಹೆಸರುಗಳನ್ನು ತೇಲಿಬಿಡಲಾಗುತ್ತಿದೆ ಎಂದರು.

ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಕರ್ನಾಟಕ ದಿಂದ ರಾಜ್ಯಸಭೆಗೆ ಆಯ್ಕೆ ಯಾಗುವುದಾದರೆ ಸ್ವಾಗತಾರ್ಹ. ಇದರಿಂದ ಪಕ್ಷದ ಬಲ ಹೆಚ್ಚಾಗಲಿದೆ. ಆದರೆ ಅಭ್ಯರ್ಥಿಗಳ ಆಯ್ಕೆ ವಿಚಾರ ಹೈಕಮಾಂಡ್‍ಗೆ ಸೇರಿದ್ದಾಗಿದೆ. ನಿನ್ನೆ ರಾತ್ರಿ ನಡೆದ ಸಚಿವರ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಎಂದು ಹೇಳಿದರು.ನಿಗಮ ಮಂಡಳಿಗಳಿಗೆ ಕಾರ್ಯಕರ್ತರ ನೇಮಕಾತಿಯ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ. ಯಾವುದೇ ಸಂದರ್ಭದಲ್ಲಾದರೂ ಇದು ಪ್ರಕಟಗೊಳ್ಳಬಹುದು ಎಂದರು.

ಅಖಂಡ ಭಾರತವೇ ನಮ್ಮ ಪರಿಕಲ್ಪನೆ : ಗೃಹಸಚಿವ ಪರಮೇಶ್ವರ್

ಶಾಸಕರನ್ನು ನಿಗಮ ಮಂಡಳಿ ಗಳಿಗೆ ನೇಮಿಸುವಾಗ ಹಿರಿತನವ ನ್ನಷ್ಟೇ ಮಾನದಂಡವನ್ನಾಗಿ ಪರಿಗಣಿಸಲಾಗಿದೆ. ಕಾರ್ಯಕರ್ತರ ನೇಮಕಾತಿಗಳ ಬಗ್ಗೆ ಸಹಜವಾದ ಅಸಮಾಧಾನಗಳಿರುತ್ತವೆ. ಎಲ್ಲರನ್ನೂ ತೃಪ್ತಿಗೊಳಿಸಲು ಸಾಧ್ಯವಿಲ್ಲ. ಜಿಲ್ಲಾಮಟ್ಟದಲ್ಲಿ ಕೆಲವರಿಗೆ ವಿರೋಧಗಳಿರುತ್ತವೆ, ಜಗಳಗಳಿರುತ್ತವೆ. ಆದರೆ ಅವರು ಹೈಕಮಾಂಡ್‍ಗೆ ಹತ್ತಿರದವರೂ ಹಾಗೂ ಬೇಕಾದವರು ಆಗಿರುತ್ತಾರೆ. ಹೀಗಾಗಿ ನೇಮಕಾತಿಯಲ್ಲಿ ವ್ಯತ್ಯಾಸಗಳಾಗುವುದು ಸಹಜ ಎಂದರು.

ನಿನ್ನೆ ನಡೆದ ಸಭೆಯಲ್ಲಿ ಲೋಕಸಭೆಯ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತಂತೆ ಅಂತಿಮ ಸುತ್ತಿನ ಚರ್ಚೆ ನಡೆದಿದೆ ಎಂದು ಹೇಳಿದರು. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ನೇಮಿಸದೇ ಇರುವುದರಿಂದ ಲೋಕಸಭೆ ಚುನಾವಣೆ ಮೇಲೆ ಸ್ವಲ್ಪಮಟ್ಟಿನ ಪರಿಣಾಮವಾಗುವ ಸಾಧ್ಯತೆಯಿದೆ. ಆದರೆ ಈ ಹಿಂದೆ ಯಾವುದೇ ಸ್ಥಾನಮಾನವಿಲ್ಲದೇ ಇದ್ದಾಗಲೂ ನಾವು ಶಾಸಕರಾಗಿ ಗೆದ್ದಿದ್ದೇವೆ. ಪ್ರಸ್ತುತ ಯುದ್ಧ ಮಾಡುವ ಕಾಲ ಅಲ್ಲ ಎಂದು ಹೈಕಮಾಂಡ್ ಸೂಚಿಸಿರುವುದರಿಂದ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಚರ್ಚೆ ಮುಂದುವರೆಸುವುದಿಲ್ಲ ಎಂದರು.

ಪ್ರಕಾಶ್ ಹುಕ್ಕೇರಿ ಹಾಗೂ ಕೆ.ಎನ್. ರಾಜಣ್ಣ ಅವರು ಹೈಕಮಾಂಡ್ ನಾಯಕರ ಬಗ್ಗೆಯೇ ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಯನ್ನು ಬದಲಾಯಿಸಿ ದ್ದಕ್ಕೆ ಕೆ.ಎನ್.ರಾಜಣ್ಣ ಅವರಿಗೆ ಕೋಪವಿದೆ. ಅದಕ್ಕಾಗಿ ಮಾತನಾಡುತ್ತಾರೆ. ಪ್ರಕಾಶ್ ಹುಕ್ಕೇರಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕರೆದು ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಕೆಲವು ಕಡೆ ನಮ್ಮ ಪಕ್ಷ ದುರ್ಬಲವಾಗಿರುವುದು ನಿಜ. ಅಲ್ಲಿ ಗೆಲ್ಲುವ ಪ್ರಬಲ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಕೊಡಬೇಕು ಎಂದರು.

RELATED ARTICLES

Latest News