Thursday, May 2, 2024
Homeರಾಜ್ಯನಿಗಮ ಮಂಡಳಿಯಲ್ಲಿ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿ : ಸತೀಶ್ ಜಾರಕಿಹೊಳಿ

ನಿಗಮ ಮಂಡಳಿಯಲ್ಲಿ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿ : ಸತೀಶ್ ಜಾರಕಿಹೊಳಿ

ಬೆಂಗಳೂರು, ನ.30- ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೂ ಅವಕಾಶ ನೀಡಬೇಕು ಮತ್ತು ಶೀಘ್ರ ನೇಮಕಾತಿಯಾದರೆ ಸೂಕ್ತ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಬರಿಗೆ ನಿಗಮ ಮಂಡಳಿ ಅವಕಾಶ ಇಲ್ಲವೇ ಇಲ್ಲ ಎಂದು ಮೊದಲೇ ಹೇಳಲಾಗಿತ್ತು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ಮೊದಲ ಸಲ ಆಯ್ಕೆಯಾದವರಿಗೆ ಅವಕಾಶ ಇಲ್ಲ. ಮೂರು ನಾಲ್ಕು ಬಾರಿ ಗೆದ್ದವರಿಗೆ ನಿಗಮ ಮಂಡಳಿ ನೀಡಲು ಪಕ್ಷ ಬದ್ದವಾಗಿದೆ.

ಹಿರಿಯರಿಗೆ ಅವಕಾಶ ಮಾಡಿಕೊಟ್ಟರೆ ಭಿನ್ನಮತಗಳು ಇರುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ಮೂವರು ಹಿರಿಯರಿದ್ದಾರೆ. ಅವರಿಗೆ ನಿಗಮ ಮಂಡಳಿ ಕೊಟ್ಟೇ ಕೊಡ್ತಾರೆ ಎಂಬ ವಿಶ್ವಾಸವಿದೆ. ಶೀಘ್ರವಾಗಿ ನಿಗಮ ಮಂಡಳಿ ನೇಮಕವಾಗಬೇಕು. ಸದನ ಪ್ರಾರಂಭ ಆಗುವ ಮೊದಲೇ ನೇಮಕವಾದರೆ ಒಳ್ಳೆಯದು ಎಂದರು.

ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡಬೇಕು, ಪಕ್ಷಕ್ಕೆ ಕಾರ್ಯಕರ್ತರೆ ಆಧಾರ ಸ್ಥಂಬ, ಸಹಜವಾಗಿ ಕಾರ್ಯಕರ್ತರಿಂದಲೂ ಬೇಡಿಕೆ ಇದೆ. ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿವೇಶನಕ್ಕೆ ಮೊದಲೇ ನೇಮಕಾತಿ ಮಾಡಿ, ಆದೇಶ ನೀಡಿದರೆ ಸೂಕ್ತ. ಆದರೆ ಮುಖ್ಯಮಂತ್ರಿ ಮತ್ತು ಅಧ್ಯಕ್ಷರು ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಡಯಾಲಿಸಿಸ್ ಕೇಂದ್ರಗಳು ಸ್ಥಗಿತ, ಆರೋಗ್ಯ ಸೇವೆ ವ್ಯತ್ಯಯ

ಬೆಳಗಾವಿ ಅಧಿವೇಶನದಲ್ಲಿ ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯೇ ಆಗಿಲ್ಲ. ಈ ಬಾರಿಯಾದರೂ ಚರ್ಚೆಯಾಗುತ್ತಾ ನೋಡಬೇಕಿದೆ ಎಂದು ಹೇಳಿದರು. ನಿಗಮ ಮಂಡಳಿ ನೇಮಕಾತಿ ವೇಳೆಯಲ್ಲಿ ಹಿರಿಯರ ಅಭಿಪ್ರಾಯ ಪಡೆದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಧಾನಕ್ಕೆ ದನಿಗೂಡಿಸಿದ ಸತೀಶ್ ಜಾರಕಿಹೊಳಿ, ಹೌದು, ಪರಮೇಶ್ವರ್ ಅಭಿಪ್ರಾಯ ಕೇಳಬೇಕಿತ್ತು. ಅವರು ಎಂಟು ವರ್ಷ ಅವರು ಅಧ್ಯಕ್ಷರಾಗಿದ್ದವರು. ಪಕ್ಷದ ಭಾಗವಾಗಿದ್ದರು. ಅವರ ಸಲಹೆ ಕೂಡ ಪಡೆಯಬೇಕಿತ್ತು ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟದಲ್ಲಿ ಸಹಮತದಿಂದಲೇ ಈ ನಿರ್ಣಯವಾಗಿದೆ. ಸಂಖ್ಯಾಬೆಂಬಲ ಇಲ್ಲದಿದ್ದರೆ ನಿರ್ಣಯ ಅಂಗೀಕಾರಗೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಗುತ್ತಿಗೆದಾರರ ಬಿಲ್‍ಗಳು ಬಾಕಿ ಉಳಿದಿರುವ ಕುರಿತು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಗಾದೆ ಇಲ್ಲ. ಬಿಬಿಎಂಪಿಯಲ್ಲಿ ಬಿಲ್ ಬಾಕಿ ಇರುವ ಕುರಿತಂತೆ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಆ ವಿಷಯವಾಗಿ ವಿಚಾರಣೆಯಾಗಿದೆ. ನಮ್ಮ ಇಲಾಖೆಯಲ್ಲಿ ಸಾಧ್ಯವಾದಷ್ಟು ಬಾಕಿಯನ್ನು ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.

ಶಿಶು ಮಾರಾಟ ದಂಧೆ : 250ಕ್ಕೂ ಹೆಚ್ಚು ಶಿಶುಗಳ ಮಾರಾಟ ಬೆಳಕಿಗೆ

ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅಸಮಾಧಾನ ವಿಚಾರವಾಗಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕ್ಷೇತ್ರದ ಸಮಸ್ಯೆ ಇರಬಹುದು. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಶಾಸಕರು ಚರ್ಚೆ ನಡೆಸಿದ್ದಾರೆ. ಈಗ ಅದು ಮುಗಿದು ಹೋದ ಕಥೆಯಾಗಿದೆ. ತಮ್ಮ ನಿರ್ದಿಷ್ಟ ಸಮಸ್ಯೆಗಳು ಮತ್ತು ಯಾರಿಂದ ಸಮಸ್ಯೆ ಎಂಬ ಬಗ್ಗೆ ಖುದ್ದು ಬಿ.ಆರ್.ಪಾಟೀಲ್ ಅವರೇ ಹೇಳಬೇಕು. ಸರ್ಕಾರ ಎಂದ ಮೇಲೆ ಪ್ರತಿನಿತ್ಯ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತವೆ. ಅವುಗಳನ್ನು ಬಗೆ ಹರಿಸಿ ಮುಂದೆ ಹೋಗಬೇಕಾಗುತ್ತದೆ. ಈ ಮೊದಲು ಶಾಸಕಾಂಗ ಸಭೆ ಕರೆದು ಬಗೆ ಹರಿಸುವ ಯತ್ನ ನಡೆಸಲಾಗಿತ್ತು. ಮುಂದೆಯೂ ಈ ರೀತಿಯ ಸಮಸ್ಯೆಗಳು ಬರಬಹುದು ಎಂದರು.

RELATED ARTICLES

Latest News