Sunday, May 5, 2024
Homeರಾಜ್ಯ10 ವರ್ಷಗಳಲ್ಲಿ ಏಕೆ ಮೋದಿ ಗ್ಯಾರಂಟಿ ನೀಡಿರಲಿಲ್ಲ..? : ಸಿಎಂ ಸಿದ್ದರಾಮಯ್ಯ

10 ವರ್ಷಗಳಲ್ಲಿ ಏಕೆ ಮೋದಿ ಗ್ಯಾರಂಟಿ ನೀಡಿರಲಿಲ್ಲ..? : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆ.5- ರಾಜ್ಯಸ ರ್ಕಾರ ಜಾರಿಗೆ ತರುವಂತಹ ಜನಪರವಾದ ಪಂಚಖಾತ್ರಿ ಯೋಜನೆಗಳನ್ನು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಏಕೆ ಜಾರಿಗೊಳಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿಂದು ಸಾರಿಗೆ ಸಂಸ್ಥೆಗೆ 100 ಅಶ್ವಮೇಧ ಬಸ್‍ಗಳನ್ನು ಸಮರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಟೀಕಿಸುತ್ತಿದ್ದರು.

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು. ಜಾರಿ ಮಾಡಿದ ಮೇಲೆ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಚಾರ ಮಾಡಿದರು. ಎಲ್ಲವೂ ಯಶಸ್ವಿಯಾದ ಬಳಿಕ ಲೋಕಸಭಾ ಚುನಾವಣೆ ನಂತರ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುತ್ತಾರೆ ಎಂದು ಹೇಳುತ್ತಿದ್ದಾರೆ. ದಿನಕ್ಕೊಂದು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಬಿಜೆಪಿಯವರ ಮಾತನ್ನು ಜನ ನಂಬುವುದಿಲ್ಲ ಎಂದರು.

ಪ್ರಧಾನಿ ನರೇಂದ್ರಮೋದಿ ಕೂಡ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದರು. ಈಗ ಮೋದಿ ಗ್ಯಾರಂಟಿ ನನ್ನ ಯೋಜನೆಗಳನ್ನು ಕಾಪಿ ಮಾಡುತ್ತಿದ್ದಾರೆ. ಈ 10 ವರ್ಷಗಳಲ್ಲಿ ಏಕೆ ಮೋದಿ ಗ್ಯಾರಂಟಿ ನೀಡಿರಲಿಲ್ಲ? ಬಿಜೆಪಿ ಸರ್ಕಾರವಿರುವ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿಯಂತಹ ಯೋಜನೆಗಳು ಜಾರಿಯಾಗುತ್ತಿಲ್ಲ. ಕ್ಯೂ ನಹಿ ದಿಯಾ ಮೋದಿ ಜೀ.. ಎಂದು ವಾಗ್ದಾಳಿ ನಡೆಸಿದರು.

ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿಯವರು ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಲಾಗಿತ್ತು. ಅಚ್ಚೇ ದಿನ್ ಬರುತ್ತದೆ ಎಂದು ಹೇಳಿದ್ದರು. ಯಾವುದನ್ನೂ ಈಡೇರಿಸಲಿಲ್ಲ. ಬದಲಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರದ ಬೆಲೆಗಳು ದುಬಾರಿಯಾಗಿದೆ.

ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ : ವಿಜಯೇಂದ್ರ ಸ್ಪಷ್ಟನೆ

ರಾಜ್ಯ ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಬಿಜೆಪಿಯವರು ಕೀಳುಮಟ್ಟದಲ್ಲಿ ಟೀಕೆ ಮಾಡುತ್ತಾರೆ. ಮೋದಿಯವರಿಗೆ, ಬಿಜೆಪಿಯವರಿಗೆ ಕಣ್ಣು ಕಾಣುವುದಿಲ್ಲವೇ? ಕನಿಷ್ಠ ಜ್ಞಾನ ಇಲ್ಲವೇ? ಜನಪರ ಯೋಜನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಇಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಮಹಿಳೆಯರು, ಗೃಹಲಕ್ಷ್ಮಿ, ಶಕ್ತಿ ಯೋಜನೆಯಿಂದ ಆಗುತ್ತಿರುವ ಆರ್ಥಿಕ ಉಳಿತಾಯವನ್ನು ಬೇರೆ ಬಾಬ್ತುಗಳಿಗೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆರ್ಥಿಕ ಅಭಿವೃದ್ಧಿಯಾಗಿದೆ. ಜಿಎಸ್‍ಟಿ ಸಂಗ್ರಹ ಹೆಚ್ಚಾಗಿದೆ ಎಂದರು. ಬಿಜೆಪಿ ಸರ್ಕಾರದವರು 3,800 ಬಸ್ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಿದ್ದರು. ಇದರಿಂದ ಜನರಿಗೆ ತೊಂದರೆಯಾಗಿದೆ. ನಮ್ಮ ಸರ್ಕಾರ 5 ಸಾವಿರಕ್ಕೂ ಹೆಚ್ಚು ಬಸ್‍ಗಳನ್ನು ಸಾರಿಗೆ ಸಂಸ್ಥೆಗೆ ಒದಗಿಸುವ ಮೂಲಕ ಉತ್ಕøಷ್ಟ ಹಾಗೂ ಸುರಕ್ಷಿತ ಸೇವೆ ಒದಗಿಸಲು ಸಮರ್ಥವಾಗಿದೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದು, ಬೇರೆ ಬೇರೆ ರಾಜ್ಯಗಳು ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲಾಗುತ್ತಿತ್ತು.

ಇದರಿಂದ ಯಾರು ಎಷ್ಟು ಬಳಕೆ ಮಾಡಿದ್ದಾರೆ ಎಂಬ ಲೆಕ್ಕ ಸಿಗುತ್ತದೆ. ಸಾರಿಗೆ ಸಂಸ್ಥೆಗಳು ಈ ಯೋಜನೆಯಿಂದ ಆರ್ಥಿಕವಾಗಿ ಸದೃಢವಾಗಿವೆ. ಮಹಿಳೆಯರ ಸುರಕ್ಷಿತೆಗಾಗಿ ಪ್ರತ್ಯೇಕ ಪಿಂಕ್ ಬಸ್‍ಗಳನ್ನು ಬಿಡುವ ಆಲೋಚನಗಳಿವೆ ಎಂದು ಹೇಳಿದರು.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‍ಆರ್‍ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News