Saturday, July 27, 2024
Homeರಾಷ್ಟ್ರೀಯಹಾಲು ಅಳತೆ ಮಾಡುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಹಾಲು ಅಳತೆ ಮಾಡುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಹಾಸನ,ಜೂ.10- ಡೇರಿಯಲ್ಲಿ ಹಾಲು ಅಳೆಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಮಧ್ಯೆ ಹೋದ ವ್ಯಕ್ತಿಯೊಬ್ಬನ ಕೊಲೆಯಾಗಿರುವ ಘಟನೆ ದುದ್ದ ಹೋಬಳಿಯ ಮಾಯಸಂದ್ರ ಸರ್ಕಲ್‌ನಲ್ಲಿ ನಡೆದಿದೆ. ಅಣ್ಣಪ್ಪ (65) ಕೊಲೆಯಾದ ವ್ಯಕ್ತಿ.

ಹಾಲು ಅಳೆಸುವ ವಿಚಾರಕ್ಕೆ ಉದ್ದೂರುಹಳ್ಳಿ ಧರ್ಮ ಮತ್ತು ಮಂಜುನಾಥ್‌ ನಡುವೆ ಗಲಾಟೆ ಪ್ರಾರಂಭವಾಗಿದ್ದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸ್ಥಳೀಯರು ಜಗಳ ಬಿಡಿಸಿ ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.

ಆದರೆ ಇಷ್ಟಕ್ಕೇ ಸುಮನಾಗದೇ ಮಂಜುನಾಥ್‌ ಹಾಗೂ ಮೃತ ಅಣ್ಣಪ್ಪ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಧರ್ಮ ಇಬ್ಬರ ಮೇಲೆ ಕಾರು ಹತ್ತಿಸಿದ್ದಾನೆ. ಆದರೆ ಅಣ್ಣಪ್ಪನಿಗೆ ಗಂಭೀರವಾಗಿ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದರೆ ಮಂಜುನಾಥ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಣ್ಣಪ್ಪ ಎಂಸಿಇ ಇಲಾಖೆಯ ನಿವೃತ್ತ ನೌಕರರಾಗಿದ್ದು, ತನ್ನದಲ್ಲದ ತಪ್ಪಿಗೆ ಮೂರನೇಯವನು ಪ್ರಾಣ ಕಳೆದುಕೊಂಡಂತಾಗಿದೆ.ಈ ಸಂಬಂಧ ದುದ್ದ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News