ನಾಸಿಕ್,ಏ.4- ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಬಾವಿಯೊಂದಕ್ಕೆ ಕಾರು ಬಿದ್ದ ಕಾರಣ ಆರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಜನರು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
ದಿಂಡೋರಿಯ ಶಿವಾಜಿನಗರ ಪ್ರದೇಶದಲ್ಲಿ ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ದುರ್ದೈವಿಗಳು ಇಲ್ಲಿನ ಬ್ಯಾಂಕ್ವೆಟ್ ಹಾಲ್ ಒಂದರಲ್ಲಿ ಸಮಾರಂಭವನ್ನು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಪೊಲೀಸ್ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಎರಡು ಕ್ರೇನ್ಗಳು ಮತ್ತು ಮುಳುಗುಗಾರರ ಸಹಾಯದಿಂದ ಮಧ್ಯರಾತ್ರಿಯ ವೇಳೆಗೆ ಕಾರು ಮತ್ತು ಅದರಲ್ಲಿದ್ದವರ ಶವಗಳನ್ನು ಹೊರತೆಗೆದರು.
ಅಪಘಾತಕ್ಕೆ ಬಲಿಯಾದವರು ದಿಂಡೋರಿ ತಾಲ್ಲೂಕಿನ ಇಂದೋರ್ ಗ್ರಾಮದ ದಾರ್ಗುಡೆ ಕುಟುಂಬದವರು ಎಂದು ಈ ಅಧಿಕಾರಿ ವಿವರಿಸಿದರು.ಮೃತರನ್ನು ಸುನೀಲ್ ದತ್ತು ದಾರ್ಗುಡೆ (32) ಅವರ ಪತ್ನಿ ರೇಷಾ, ಆಶಾ ಅನಿಲ್ ದಾರ್ಗುಡೆ (32) ಮತ್ತು 7 ರಿಂದ 14ರ ನಡುವಿನ ವಯಸ್ಸಿನ ಐವರು ಬಾಲಕಿಯರು ಮತ್ತು 11 ವರ್ಷದ ಓರ್ವ ಬಾಲಕ ಎಂದು ಗುರುತಿಸಲಾಗಿದೆ.
ಶವಗಳನ್ನು ದಿಂಡೋರಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣ ತಿಳಿಯಲು ತನಿಖೆ ಮುಂದುವರೆದಿದೆ.
