ಶ್ರೀನಗರ, ಮಾ.15- ಜಮ್ಮು -ಕಾಶೀರದ ಉರಿ ಸೆಕ್ಟರ್ನ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದಿಂದ ನಡೆದ ನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ಇಂದು ವಿಫಲಗೊಳಿಸಿದ್ದು, ಒಬ್ಬ ಪಾಕಿಸ್ತಾನಿ ಉಗ್ರನನ್ನು ಹೊಡೆದುರುಳಿಸಿದೆ ಎಂದು ಸೇನೆ ತಿಳಿಸಿದೆ.
ಜಮು-ಕಾಶೀರ ಪೊಲೀಸರಿಂದ ಬಂದ ಖಚಿತ ಗುಪ್ತಚರ ಮಾಹಿತಿಯ ಆಧಾರದಲ್ಲಿ ಮಾರ್ಚ್ 14 ಮತ್ತು 15ರ ಮಧ್ಯರಾತ್ರಿ ಉರಿ ಸೆಕ್ಟರ್ನ ಬುಚ್ಚರ್ ಪ್ರದೇಶದಲ್ಲಿ ಸೇನೆ ಮತ್ತು ಭದ್ರತಾ ಪಡೆಗಳು ಸಂಯುಕ್ತ ಕಾರ್ಯಾಚರಣೆ ನಡೆಸಿದವು ಎಂದು ಶ್ರೀನಗರದಲ್ಲಿರುವ ಚಿನಾರ್ ಕಾರ್ಪ್್ಸ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದೆ.
ಕಾರ್ಯಾಚರಣೆ ವೇಳೆ ದಟ್ಟ ಕಾಡಿನ ಪ್ರದೇಶದಲ್ಲಿ ಅನುಮಾನಾಸ್ಪದ ಚಲನವಲನ ಕಂಡುಬಂದಿದ್ದು, ಅಡಗುತಾಣದಲ್ಲಿ ತಂಗಿದ್ದ ಉಗ್ರನನ್ನು ಸೈನಿಕರು ಪತ್ತೆ ಹಚ್ಚಿದ್ದರು. ಈ ವೇಳೆ ಉಗ್ರ ಅಡ್ಡಾದಿಡ್ಡಿ ಗುಂಡಿನ ದಾಳಿ ನಡೆಸಿದ್ದಾನೆ.
ಸೇನಾ ಪಡೆಗಳು ಪ್ರತಿದಾಳಿ ನಡೆಸಿದ ಪರಿಣಾಮ ಪಾಕಿಸ್ತಾನದ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಲಾಗಿದೆ.ಕಾರ್ಯಾಚರಣೆ ವೇಳೆ ಎಕೆ ರೈಫಲ್, ಪಿಸ್ತೂಲ್ ಹಾಗೂ ಹೆಚ್ಚಿನ ಪ್ರಮಾಣದ ಗುಂಡುಗಳು ಸೇರಿದಂತೆ ಹಲವು ಮಾರಕಾಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಸೇನೆ ಮಾಹಿತಿ ನೀಡಿದೆ.
