ಬಿಲಾಸ್ಪುರ, ಜು. 9 – ಸರ್ಕಾರಿ ಶಾಲೆಗಳ ಬೆಳಗಿನ ಪ್ರಾರ್ಥನೆಯಲ್ಲಿ ಗಾಯತ್ರಿ ಮಂತ್ರ, ಸರಸ್ವತಿ ವಂದನೆ ಮತ್ತು ಶಾಂತಿ ಮಂತ್ರಗಳನ್ನು ಪಠಿಸುವುದನ್ನು ತಡೆಯಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಛತ್ತೀಸ್ಗಢ ಹೈಕೋರ್ಟ್ ವಜಾಗೊಳಿಸಿದೆ.
ಯಾವುದೇ ನಿರ್ದಿಷ್ಟ ಧಾರ್ಮಿಕ ಸಿದ್ಧಾಂತವನ್ನು ಬಲವಂತವಾಗಿ ಹೇರದ ಹೊರತು, ಶಾಲೆಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವುದನ್ನು ಸಂವಿಧಾನವು ನಿಷೇಧಿಸುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಗಾಯತ್ರಿ ಮಂತ್ರ ವಿವಾದವೇನು, ಆದೇಶದಲ್ಲಿ ಏನಿದೆ?ಛತ್ತೀಸ್ಗಢ ಶಾಲಾ ಶಿಕ್ಷಣ ಇಲಾಖೆಯು ಜೂನ್ 12 ರಂದು ಸುತ್ತೋಲೆಯೊಂದನ್ನು ಹೊರಡಿಸಿತ್ತು. ಅದರ ಪ್ರಕಾರ, 2026-27ನೇ ಸಾಲಿನಿಂದ ಎಲ್ಲಾ ಸರ್ಕಾರಿ ಶಾಲೆಗಳ ಬೆಳಗಿನ ಪ್ರಾರ್ಥನೆ ವೇಳೆ ರಾಷ್ಟ್ರಗೀತೆ, ನಾಡಗೀತೆ, ಸರಸ್ವತಿ ವಂದನೆ, ಗುರು ಮಂತ್ರ ಹಾಗೂ ದಿನದ ಕೊನೆಯಲ್ಲಿ ಗಾಯತ್ರಿ ಮಂತ್ರ ಮತ್ತು ಶಾಂತಿ ಮಂತ್ರಗಳನ್ನು ಪಠಿಸಬೇಕು ಎಂದು ಸೂಚಿಸಲಾಗಿತ್ತು.
ಇದನ್ನು ವಿರೋಧಿಸಿ ಕೆಲವು ವ್ಯಕ್ತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದು ಶಿಕ್ಷಣದ ಕೇಸರಿಕರಣ ಮತ್ತು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಸರ್ಕಾರಿ ಅನುದಾನ ಪಡೆಯುವ ಶಾಲೆಗಳಲ್ಲಿ ಇಂತಹ ಧಾರ್ಮಿಕ ಮಂತ್ರಗಳನ್ನು ಕಡ್ಡಾಯಗೊಳಿಸುವುದರಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಅರ್ಜಿದಾರರ ಪರ ವಕೀಲ ಆಮಿರ್ ಖಾನ್ ವಾದಿಸಿದ್ದರು.
ಛತ್ತೀಸ್ಗಢ ಸರ್ಕಾರ ಈ ಆದೇಶವು ಯಾವುದೇ ಧರ್ಮವನ್ನು ಪ್ರಚಾರ ಮಾಡುವ ಉದ್ದೇಶ ಹೊಂದಿಲ್ಲ. ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸದುದ್ದೇಶ ಹೊಂದಿದೆ.
ಜ್ಞಾನ ಮತ್ತು ಏಕಾಗ್ರತೆಯ ಸಂಕೇತ:
ಗಾಯತ್ರಿ ಮಂತ್ರವು ಕೇವಲ ಪೂಜೆಯಲ್ಲ, ಅದು ಜ್ಞಾನ, ಬುದ್ಧಿವಂತಿಕೆ ಮತ್ತು ಸಕಾರಾತ್ಮಕ ಯೋಚನೆಗಳನ್ನು ನೀಡುವ ಮಂತ್ರವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.ಯಾರ ಮೇಲೂ ಬಲವಂತವಿಲ್ಲ: ಸರ್ಕಾರದ ಆದೇಶದಲ್ಲಿರುವ ಕಡ್ಡಾಯ ಎಂಬ ಪದವು ಶಾಲೆಗಳಲ್ಲಿ ಶಿಸ್ತು ಕಾಪಾಡಲು ಮಾತ್ರ ಬಳಸಲಾಗಿದೆಯೇ ಹೊರತು ಯಾರ ಮೇಲೂ ಧರ್ಮ ಹೇರಲು ಅಲ್ಲ ಎಂದು ವಾದಿಸಿತ್ತು.
