ನವದೆಹಲಿ, ಫೆ.5- ಗಣರಾಜ್ಯೋತ್ಸವ ಆಚರಣೆಗೆ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯ ಎರಡು ಸ್ಥಳಗಳಲ್ಲಿ ಖಲಿಸ್ತಾನಿ ಪರ ಘೋಷಣೆಗಳನ್ನು ಬರೆದಿದ್ದಕ್ಕಾಗಿ ಇಬ್ಬರು ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ.
ಈ ಇಬ್ಬರು ಭಯೋತ್ಪಾದಕರು ಅಮೆರಿಕ ಮೂಲದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತು ಭಾರತದಲ್ಲಿ ಅವರ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಕೆನಡಾದಲ್ಲಿ ನೆಲೆಸಿರುವ ಪನ್ನುನ್ ಅವರ ಆಪ್ತ ಸಹಚರರು ಈ ಕಾರ್ಯಾಚರಣೆಯನ್ನು ನಡೆಸಲು ಬಲ್ಜಿಂದರ್ ಮತ್ತು ರೋಹಿತ್ ಅಲಿಯಾಸ್ ಕಿರಾತ್ ಅವರನ್ನು ನೇಮಿಸಿಕೊಂಡಿದ್ದಾರೆ. ಬಲ್ಜಿಂದರ್ ದೆಹಲಿಯಲ್ಲಿ ಆಂಬ್ಯುಲೆನ್ಸ್ ಓಡಿಸುತ್ತಿದ್ದರೆ, ರೋಹಿತ್ ಅವರ ಪಾಲುದಾರರಾಗಿದ್ದಾರೆ.
ದೆಹಲಿಯ ತಿಲಕ್ ನಗರದ ನಿವಾಸಿಯಾಗಿರುವ ಈ ಮಾಸ್ಟರ್ ಮೈಂಡ್ ಜನವರಿ 26 ರ ಕೆಲವು ದಿನಗಳ ಮೊದಲು ಕೆನಡಾಕ್ಕೆ ಹೋಗಿದ್ದರು ಮತ್ತು ಪನ್ನುನ್ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದರು. ದೆಹಲಿಯಲ್ಲಿ ಖಾಲಿಸ್ತಾನ್ ಜಿಂದಾಬಾದ್ (ಖಲಿಸ್ತಾನ್ ಚಿರಾಯುವಾಗಲಿ) ಎಂದು ಬರೆಯಲು ಇಬ್ಬರು ಭಯೋತ್ಪಾದಕರಿಗೆ 2 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಸಂಪೂರ್ಣ ಪಿತೂರಿ ಕೆನಡಾದಿಂದ ರೂಪಿಸಲ್ಪಟ್ಟಿದ್ದು, ಜನವರಿ 26 ರ ಮೊದಲು ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದು ಇದರ ಉದ್ದೇಶವಾಗಿತ್ತು.
ದೆಹಲಿ ಪೊಲೀಸರು ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ್ದಾರೆ ಮತ್ತು ಇತರ ನಿಕಟ ಸಹಚರರಿಗಾಗಿ ಹುಡುಕಾಟ ನಡೆಯುತ್ತಿದೆ.ವಾರಗಳ ಹಿಂದೆ, ಜನವರಿ 23 ರಂದು, ಗಣರಾಜ್ಯೋತ್ಸವದ ಮೊದಲು ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಪನ್ನುನ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿಕೊಂಡಿದ್ದರು.
