ಚೆನ್ನೈ,ಏ.21- ಚಿತ್ರರಂಗ ತೊರೆದು ರಾಜಕೀಯಕ್ಕೆ ಎಂಟ್ರಿ ಪಡೆದು ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿರುವ ದಳಪತಿ ವಿಜಯ್ ಅವರ ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ 100 ಕೋಟಿ ರೂ.ಗಳ ಆಸ್ತಿ ಮುಚ್ಚಿಟ್ಟಿದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ಗೆ ಅವರ ನಾಮಪತ್ರ ತಿರಸ್ಕೃತಗೊಳ್ಳುವ ಆತಂಕ ಹೆಚ್ಚಾಗಿದೆ.
ವಿಜಯ್ ಅವರು ಪೆರಂಬೂರ್ ಮತ್ತು ತಿರುಚ್ಚಿ ಪೂರ್ವದಲ್ಲಿ ಸಲ್ಲಿಸಿರುವ ಆಸ್ತಿ ವಿವರಗಳಲ್ಲಿ ಸುಮಾರು 105 ಕೋಟಿ ರೂಪಾಯಿಗಳ ವ್ಯತ್ಯಾಸ ಇರುವುದನ್ನು ಮದ್ರಾಸ್ ಹೈಕೋರ್ಟ್ ಅಕ್ರಮ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.ಅಫಿಡವಿಟ್ನಲ್ಲಿನಲ್ಲಿರುವ ವ್ಯತ್ಯಾಸ ಮತ್ತು ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ವಿಜಯ್ ಮರೆಮಾಚಿರುವ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಆಸ್ತಿ ವಿವರಗಳಲ್ಲಿನ ಭಾರಿ ವ್ಯತ್ಯಾಸದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗಕ್ಕೆ ಸೂಚಿಸಿದೆ.ಇದು ಕೇವಲ ಆರಂಭಿಕ ಹಂತದ ವಿಚಾರಣೆಯಾಗಿದ್ದು ನ್ಯಾಯಾಲಯವು ಯಾವುದೇ ಆದೇಶವನ್ನು ಪ್ರಕಟಿಸಿಲ್ಲ. ನೋಟಿಸ್ಗೆ ಸಂಬಂಧಪಟ್ಟವರು ನೀಡುವ ಉತ್ತರವನ್ನು ಆಧರಿಸಿ ಮುಂದಿನ ವಿಚಾರಣೆ ನಡೆಯಲಿದೆ.
ಏನಿದು ಪ್ರಕರಣ?ಎರಡು ಕ್ಷೇತ್ರಗಳಲ್ಲಿ ಸಲ್ಲಿಸಿರುವ ವಿಜಯ್ ಅವರ ಅಫಿಡವಿಟ್ಗಳಲ್ಲಿ ಅವರ ಆದಾಯದಲ್ಲಿ ಹೊಂದಾಣಿಕೆಯಿಲ್ಲ. ತಿರುಚ್ಚಿ ಸ್ಥಾನಕ್ಕೆ ವಿಜಯ್ ಸಲ್ಲಿಸಿದ ದಾಖಲೆಗಳು 220 ಕೋಟಿ ರೂ. ಆದಾಯವನ್ನು ತೋರಿಸಿದರೆ, ಪೆರಂಬೂರು ಅಫಿಡವಿಟ್ನಲ್ಲಿ 115 ಕೋಟಿ ರೂ.ಗಳಷ್ಟು ತೋರಿಸಿದ್ದು, 105 ಕೋಟಿ ರೂ.ಗಳ ವ್ಯತ್ಯಾಸವಿದೆ ಎಂದು ಪೆರಂಬೂರಿನ ಮತದಾರರೊಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ 2015-16ರ ಅವಧಿಯ ಆದಾಯ ತೆರಿಗೆ ಬಾಕಿ ಮತ್ತು ದಂಡಕ್ಕೆ ಸಂಬಂಧಿಸಿದಂತೆ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಫೆಬ್ರವರಿ 2026ರಲ್ಲಿ ಹೈಕೋರ್ಟ್ ವಜಾಗೊಳಿಸಿತ್ತು.
