ಬೆಂಗಳೂರು,ಮೇ 15- ಹಿಂದೂಗಳು ಅವರ ನಂಬಿಕೆ, ಆಚರಣೆ, ಧಾರ್ಮಿಕ ಚಿಹ್ನೆಗಳೆಂದರೆ ನಿಮಗೆ ಯಾಕೆ ಇಷ್ಟು ಅಸಹನೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಹಿಂದುಗಳೆಂದರೆ, ಹಿಂದೂಗಳ ನಂಬಿಕೆಗಳೆಂದರೆ, ಹಿಂದೂಗಳ ಆಚರಣೆ, ಅವರ ಧಾರ್ಮಿಕ ಚಿಹ್ನೆಗಳೆಂದರೆ ಸಿದ್ದರಾಮಯ್ಯನವರಿಗೆ ಏಕೆ ಇಷ್ಟು ದ್ವೇಷ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಬರೀ ಅಲ್ಪಸಂಖ್ಯಾತರಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ ಸ್ವಾಮಿ, ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ ಎಂದು ಎಚ್ಚರಿಸಿದ್ದರೆ. ನಿಮಗೆ ತಿಲಕ ಕಂಡರೆ ನಡುಕ, ಕೇಸರಿ ಕಂಡರೆ ಮೈಯೆಲ್ಲ ಉರಿ, ಹನುಮ ಧ್ವಜ ಕಂಡರೆ ತಳಮಳ, ರಾಮಮಂದಿರ ಎಂದರೆ ಕಿರಿಕಿರಿ ಎಂದು ಕಿಚಾಯಿಸಿದ್ದಾರೆ.
ಆದರೆ ಅನ್ಯಮತೀಯ ಸಂಭ್ರಮಗಳಲ್ಲಿ ಮಾತ್ರ ಘಮಘಮಿಸುವ ಸೆಂಟು ಹೊಡೆದುಕೊಂಡು, ಟೋಪಿ ಹಾಕಿಕೊಂಡು, ನವ ಮದುಮಗನಂತೆ ಸಿಂಗಾರಗೊಳ್ಳುತ್ತೀರಿ ಎಂದು ಅಶೋಕ್ ಕುಹಕವಾಡಿದ್ದಾರೆ.
