Saturday, July 27, 2024
Homeರಾಜ್ಯಸರ್ಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ- ನೆಮ್ಮದಿ : ಆರ್.ಅಶೋಕ್

ಸರ್ಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ- ನೆಮ್ಮದಿ : ಆರ್.ಅಶೋಕ್

ಬೆಂಗಳೂರು, ಮಾ.3- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ಮಾತ್ರವಲ್ಲ ಇಡೀ ಸರ್ಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ- ನೆಮ್ಮದಿಯ ಭರವಸೆ ಲಭಿಸಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಬಾಂಬ್ ಬ್ಲಾಸ್ಟ್ ಆಗಬೇಕು? ಈ ಸರ್ಕಾರ ಯಾಕೆ ಕಣ್ಮುಚ್ಚಿ ಕುಳಿತಿದೆ? ಯಾರನ್ನು ಓಲೈಸುತ್ತಿದೆ? ಎಫ್‍ಎಸ್‍ಎಲ್ ವರದಿ ಬಿಡುಗಡೆ ಮಾಡದೆ ಇರಲು ಸರ್ಕಾರದ ಮೇಲೆ ಸೋನಿಯಾ ಗಾಂಧಿ- ರಾಹುಲ್ ಗಾಂಧಿಯವರ ಒತ್ತಡ ಇದೆಯೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಮನಸ್ಸನ್ನು ಪೂರ್ತಿ ಕಲ್ಮಶ ಮಾಡುವ ಕಡೆಗೆ ಹೋಗುತ್ತಿದೆ. ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ವಿಧಾನಸೌಧ ರಾಜ್ಯದ ಹೃದಯವಿದ್ದಂತೆ. ಅಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಅಕ್ಷಮ್ಯ ಎಂದು ತಿಳಿಸಿದರು.ಅಲ್ಪಸಂಖ್ಯಾತರು ತಮಗೆ ಮತ ಹಾಕಿದರೆ ಸಾಕು, ಬಹುಸಂಖ್ಯಾತರನ್ನು ಬಗ್ಗು ಬಡಿಯುತ್ತೇವೆ ಎಂಬ ನೀತಿ ಕಾಂಗ್ರೆಸ್ ಪಕ್ಷದ್ದು ಎಂದು ಅವರು ತಿಳಿಸಿದರು.

ನೀವೇನಾದರೂ ಮಾಡಿ; ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಭೆ ಮಾಡಿ. ಮೈಸೂರಿನಲ್ಲಿ ಅವರ ಶಾಸಕರ ಹತ್ಯೆ ಪ್ರಯತ್ನ ಮಾಡಿದರೂ ಏನೂ ಮಾಡುವುದಿಲ್ಲ ಎಂಬ ಕರ್ನಾಟಕದ ಕಾಂಗ್ರೆಸ್ ಮನಸ್ಥಿತಿ ಗಂಡಾಂತರ ತರುವಂತಿದೆ ಎಂದು ಆಕ್ಷೇಪ ಸೂಚಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರೆಂಬ ಇಲಿಗಳು ಬಿಲಕ್ಕೆ ಬಂದು ಹುಲಿಗಳಾಗಿವೆ. ನಮ್ಮನ್ನೇನೂ ಮಾಡುವುದಿಲ್ಲ ಎಂಬ ಮನಸ್ಥಿತಿ ಭಯೋತ್ಪಾದಕರದ್ದಾಗಿದೆ. ಇದು ದೊಡ್ಡ ಆಘಾತ ತಂದಿದೆ. ಸರ್ಕಾರವು ಅವರ ಬಗ್ಗೆ ಸಹಾನುಭೂತಿ ತೋರುವುದು ಆಘಾತಕಾರಿ ವಿಚಾರ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಕೋಮುವಾದದ ಕಡೆ ವಾಲುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆಯ ಪ್ರವೃತ್ತಿ ಮುಂದುವರೆದಿದೆ. ಅಲ್ಪಸಂಖ್ಯಾತರ ಬಗ್ಗೆ ಬರುವ ವಿಷಯಗಳನ್ನು ಕಾಂಗ್ರೆಸ್ಸಿಗರು ನಿರಂತರವಾಗಿ ಮುಚ್ಚಿಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಬಾಂಬ್ ಸ್ಪೋಟದ ಆರೋಪಿಗಳನ್ನು ಅಮಾಯಕರು, ಮೈ ಬ್ರದರ್ಸ್ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಟೀಕಿಸಿದರು.

ವಿಧಾನಸೌಧದಲ್ಲಿ ಕೆಲದಿನಗಳ ಹಿಂದೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಆ ರೀತಿ ಹೇಳಿಲ್ಲ; ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
ಫಾರೆನ್ಸಿಕ್ ವರದಿಯಲ್ಲಿ ಹಾಗೆ ಆಗಿಲ್ಲ ಎಂದು ಬರಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮಾಧ್ಯಮಗಳು ಘೋಷಣೆ ಕೂಗಿದ್ದು ನಿಜ ಎಂದು ಪ್ರಕಟಿಸಿದರೂ ಕಾಂಗ್ರೆಸ್‍ವರು ಅದನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಆಗಿದೆ. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಹೋಗಿ, ಇದು ಬಿಸಿನೆಸ್ ರೈವಲ್ರಿ; ತಿಂಡಿ ವಿಚಾರದಲ್ಲಿ ಒಳಜಗಳ ಎಂದಿದ್ದರು. ಈಗ ಅದು ಭಯೋತ್ಪಾದಕರ ಕೃತ್ಯ ಎಂದು ಗೊತ್ತಾಗಿದೆ. ಆದರೂ ಅದನ್ನು ಮುಚ್ಚಿಡುತ್ತಿದ್ದಾರೆ ಎಂದು ಟೀಕಿಸಿದರು.

RELATED ARTICLES

Latest News