Saturday, April 18, 2026
Homeರಾಜ್ಯಚಿನ್ನಸ್ವಾಮಿ ಕ್ರೀಡಾಂಗಣ ಮುಂಜಾಗ್ರತೆ ಪರಿಶೀಲಿಸಿ ಐಪಿಎಲ್‌ಗೆ ಅನುಮತಿ : ಗೃಹ ಸಚಿವ ಪರಮೇಶ್ವರ್‌

ಚಿನ್ನಸ್ವಾಮಿ ಕ್ರೀಡಾಂಗಣ ಮುಂಜಾಗ್ರತೆ ಪರಿಶೀಲಿಸಿ ಐಪಿಎಲ್‌ಗೆ ಅನುಮತಿ : ಗೃಹ ಸಚಿವ ಪರಮೇಶ್ವರ್‌

Chinnaswamy Stadium precautions reviewed and IPL allowed: Home Minister Parameshwara

ಬೆಂಗಳೂರು, ಫೆ.11- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿಗಳನ್ನು ನಡೆಸಲು ಅನುಮತಿಸುವ ಸುಳಿವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯಾಯಮೂರ್ತಿ ಮೈಕೆಲ್‌ ಕುನ್ಹಾ ಅವರ ಆಯೋಗದ ವರದಿ ಆಧರಿಸಿ ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಪರಿಶೀಲಿಸಿ ಕ್ರಿಕೆಟ್‌ ಪಂದ್ಯಾವಳಿ ನಡೆಸಲು ಅನುಮತಿ ನೀಡಲಾಗುವುದು ಎಂದರು.

ನ್ಯಾಯಮೂರ್ತಿಗಳ ವರದಿ ಆಧರಿಸಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಎಂದು ಮೂರು ಭಾಗ ಮಾಡಲಾಗಿದೆ. ಮೊದಲ ಹಂತದಲ್ಲಿ ಕಿರು ಅವಧಿಯ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಪರಿಶೀಲಿಸಲು ಗ್ರೇಟರ್‌ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಮತ್ತು ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಈಗಾಗಲೇ ಎರಡು ಬಾರಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ದೀರ್ಘಾವಧಿಯ ಯೋಜನೆಗಳನ್ನೂ ಈಗಲೇ ಈಡೇರಿಸಿ ಎಂದರೆ ಅದು ಕಷ್ಟ ಸಾಧ್ಯ. ಅಲ್ಪಕಾಲಿಕ ಕ್ರಮಗಳನ್ನು ಕೈಗೊಂಡಿದ್ದರೆ ಐಪಿಎಲ್‌ ಪಂದ್ಯಾವಳಿಗಳಿಗೆ ಅವಕಾಶ ನೀಡುವುದಾಗಿ ತಿಳಿಸಿದರು.

ಬಂದೂಕು ಹಿಡಿದು ನೃತ್ಯ ಮಾಡಿರುವ ಕಾಂಗ್ರೆಸ್‌‍ ಮುಖಂಡ ಮತೀನ್‌ ಪಟೇಲ್‌ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಯಾವುದೇ ಪಕ್ಷದವರಾಗಿದ್ದರೂ ಅದು ನಂತರದ ವಿಷಯ. ಕಾನೂನು ಬಾಹಿರ ಕೃತ್ಯ ಮಾಡಿದ್ದರೆ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಸಚಿವ ಪ್ರಿಯಾಂಕ್‌ ಖರ್ಗೆ, ಅಫ್ಜಲ್‌ಪುರ ಕ್ಷೇತ್ರದ ಶಾಸಕರ ಆಪ್ತರು ಎಂಬ ಕಾರಣಕ್ಕೆ ವಿನಾಯಿತಿ ನೀಡುವುದಿಲ್ಲ. ತಮ ಆಪ್ತರಿಗೆ ಯಾವ ಸಚಿವರು, ಶಾಸಕರೂ ಕಾನೂನು ಉಲ್ಲಂಘನೆ ಮಾಡಿ ಎಂದು ಹೇಳಿರುವುದಿಲ್ಲ ಎಂದರು.

ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್‌.ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಅವರ ಅರ್ಜಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನಿ ನಿರಾಕರಿಸಿ ಎರಡು ದಿನಗಳ ಹಿಂದೆಯಷ್ಟೆ ಆದೇಶ ನೀಡಿದೆ. ಇನ್ನೂ ಮುಂದೆ ಅವರನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತದೆ. ಅವರಾಗಿಯೇ ಬಂದು ಶರಣಾದರೆ ಒಳ್ಳೆಯದು ಇಲ್ಲವಾದರೆ, ಪೊಲೀಸರು ಬಂಧಿಸಿ ಕರೆ ತರುತ್ತಾರೆ ಎಂದು ಹೇಳಿದರು.

RELATED ARTICLES

Latest News