ಬೆಂಗಳೂರು,ಮೇ1- ಜಿಬಿಎ ಚುನಾವಣೆ ನಡೆಸಲು ತಮ ಬಳಿ ಹಣ ಇಲ್ಲ ಎಂದು ಸುಪ್ರೀಂಕೋರ್ಟಿಗೆ ಕುಂಟು ನೆಪ ಹೇಳಿ ಕೈ ಚೆಲ್ಲಿ ಕುಳಿತಿರುವ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು 600 ಕೋಟಿ ರೂ.ಗಳ ಓಲೈಕೆ ರಾಜಕಾರಣಕ್ಕೆ ಮುಂದಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ಕ್ರಿಯಾಯೋಜನೆ ರೂಪಿಸಿರುವುದಕ್ಕೆ
ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಒಂದು ವರ್ಗವನ್ನು ತೃಪ್ತಿಪಡಿಸುವ ಹುನ್ನಾರವೇ ಹೊರತು ನಾಡಿನ ಹಿತವಲ್ಲ ಎಂದು ಆಕ್ಷೇಪಿಸಿದ್ದಾರೆ. ಜಿಬಿಎ ಚುನಾವಣೆ ನಡೆಸಲು ದುಡ್ಡಿಲ್ಲ, ಅಂಗನವಾಡಿ/ಆಶಾ ಕಾರ್ಯಕರ್ತೆಯರಿಗೆ ಸಮರ್ಪಕ ಸಂಬಳವಿಲ್ಲ, ಗ್ರಂಥಾಲಯ, ನರೇಗಾ ಸಿಬ್ಬಂದಿ ಹಾಗೂ ಉಪನ್ಯಾಸಕರಿಗೆ ಪಗಾರವಿಲ್ಲ! ಎಂದು ವ್ಯಂಗ್ಯವಾಡಿದ್ದಾರೆ.
ನಾಡಿನ ರೈತರು ಸರ್ಕಾರಿ ಕಚೇರಿ ಆವರಣದಲ್ಲೇ ವಿಷ ಸೇವಿಸುತ್ತಿದ್ದಾರೆ, ಉದ್ಯೋಗಾಕಾಂಕ್ಷಿಗಳು ನೇಮಕಾತಿ ಮಾಡಿ ಎಂದು ಬೀದಿಗಿಳಿದು ಹೋರಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಮಾತ್ರ ಅಲ್ಪಸಂಖ್ಯಾತರ ಓಲೈಕೆಯೇ ಪರಮೋಚ್ಚ ಗುರಿಯಾಗಿದೆ ಎಂದು ಟೀಕಿಸಿದ್ದಾರೆ.
ನಾಡಿನ ಜನರ ತೆರಿಗೆ ಹಣವನ್ನು ಕೇವಲ ಚುನಾವಣಾ ಲಾಭಕ್ಕೆ ಬಳಸುತ್ತಿರುವ ಈ ಸರ್ಕಾರಕ್ಕೆ ನೈತಿಕತೆ ಎಂಬುವುದೇ ಇಲ್ಲ ಎಂದು ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ.
