ರಾಮನಗರ, ಆ.23- ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿ ವಶಪಡಿಸಿಕೊಂಡು ಕಳೆದ 20 ವರ್ಷದಿಂದ ಅನಧಿಕೃತವಾಗಿ ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಕರ್ನಾಟಕದ ಇತಿಹಾಸದಲ್ಲೇ ಇಂತಹ ಕೆಟ್ಟ ಹಗರಣ ನೋಡಲು ಸಾಧ್ಯವಿಲ್ಲ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ರಸ್ತೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರದ ಹಣ ಕೊಟ್ಟಿಲ್ಲ. ಈಗ ಕುಮಾರಸ್ವಾಮಿ ಕೇಂದ್ರದಲ್ಲಿ ಟೋಲ್ ನಿಲ್ಲಿಸಲಿ ಅಂತಾರೆ. ಅವರಿಗೆ ಓದೋಕೆ ಬರುತ್ತಾ? ವಿಷಯ ಗೊತ್ತಿದೆಯೇ? ಆ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರಿದ್ದಲ್ಲ, ಅದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಅಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದೇ ದೊಡ್ಡ ಅಕ್ರಮ. ಸರ್ಕಾರ ತಕ್ಷಣ ಕ್ರಮವಹಿಸಿ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇದು ಕೇವಲ ಜೆಡಿಎಸ್ ಕಾರ್ಯಕರ್ತರನ್ನ ಎತ್ತಿಕಟ್ಟುವ ವಿಚಾರವಲ್ಲ, ಇಡೀ ರಾಜ್ಯದ ಜನರೇ ಎದ್ದು ನಿಲ್ಲಬೇಕಾಗಿದೆ. ಅಂತಹ ದೊಡ್ಡ ಹಗರಣವಾಗಿದೆ. ರೈತರ ಭೂಮಿ ಲಪಟಾಯಿಸುವ ಕೆಲಸದ ವಿರುದ್ಧ ಧ್ವನಿ ಎತ್ತಲು ಜನ ನಮಗೆ ಶಕ್ತಿ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಸಂಸದ ಡಿ.ಕೆ.ಸುರೇಶ್, ಮಾಗಡಿ ಶಾಸಕ ಮತ್ತು ಸಚಿವ ಹೆಚ್.ಸಿ.ಬಾಲಕೃಷ್ಣ ಮಾಡಿರುವ ಟೀಕೆಗಳಿಗೆ ತೀವ್ರ ತಿರುಗೇಟು ನೀಡಿದ ಅವರು, ನಿನ್ನೆ ಇಬ್ಬರು ಮಹಾನ್ ನಾಯಕರು, ಅಭಿವೃದ್ಧಿಯ ಹರಿಕಾರರು ಹೇಳಿಕೆ ಕೊಟ್ಟಿದ್ದಾರೆ. ನಾವು ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಅಂತಾರೆ. ಹೌದು ನಾವು ಕೈಮುಗಿಯೋದು ಸಂಸ್ಕೃತಿಯ ಬೃಂದಾವನಕ್ಕೆ, ಆದರೆ ಅವರದ್ದು ಸೂಟ್ಕೇಸ್ ಬೃಂದಾವನ ಎಂದು ಲೇವಡಿ ಮಾಡಿದರು.
ಬಿಡದಿ ಟೌನ್ಶಿಪ್ಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ್ದೀರಿ. ಈ ಹಿಂದೆ ಅವರೇ ಬಿಡದಿಯ ಈಗಲ್ಟನ್ ವಿಚಾರದಲ್ಲಿ ಎಕರೆಗೆ 12 ಕೋಟಿ ರೂ. ಪರಿಹಾರ ಕೊಡಬೇಕು ಎಂದು ತೀರ್ಪು ನೀಡಿದ್ದರು. 10 ವರ್ಷದ ಹಿಂದೆಯೇ 12 ಕೋಟಿ ರೂ. ಎಂದು ತೀರ್ಪು ಕೊಟ್ಟಿದ್ದಾರೆ. ಈಗ ಬಿಡದಿಯ ರೈತರ ಜಮೀನಿಗೆ ಎಷ್ಟು ಹಣ ಕೊಡಬೇಕು ಎಂದು ನಾನು ನಿವೃತ್ತ ನ್ಯಾಯಾಧೀಶರನ್ನು ಪ್ರಶ್ನಿಸುತ್ತೇನೆ. ಈ ಬಗ್ಗೆ ಸ್ಪಷ್ಟಪಡಿಸಿ ವರದಿ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
4,000 ಕುಟುಂಬಗಳಿಗೆ ನಿವೇಶನ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ. ಭೂಮಿ ಕೊಟ್ಟ ರೈತರಿಗೆ ಇನ್ನೂ ದುಡ್ಡು ಕೊಟ್ಟಿಲ್ಲ. ಇದನ್ನು ನೋಡಿ ನಾನು ಧ್ವನಿ ಎತ್ತಿದ್ದೇನೆ ಹೊರತು ಅಭಿವೃದ್ಧಿಗೆ ಅಡ್ಡಿ ಮಾಡಲು ಅಲ್ಲ. ರೈತರು ಇನ್ನೂ ಎಷ್ಟು ವರ್ಷ ಕಾಯಬೇಕು? ನೈಸ್ ರಸ್ತೆ ಮಾಡಲು ಎಷ್ಟು ವರ್ಷ ಬೇಕು? ಈಗಾಗಲೇ ಬೆಂಗಳೂರು-ಮೈಸೂರು ಎಕ್್ಸಪ್ರೆಸ್ ಹೈವೇ ಆಗಿದೆ ಎಂದು ಅವರು ಹೇಳಿದರು.
ಕುಮಾರಸ್ವಾಮಿ ಪಾಪದ ಕೊಳೆಯನ್ನು ನಾವು ತೊಳೆಯುತ್ತಿದ್ದೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿಕಾರಿದ ಅವರು, ಕೊಳೆ ನಾ? ಎಲ್ಲಿದೆ ಕೊಳೆ? ನಾವು ರಾಮನಗರಕ್ಕೆ ಬಂದಾಗ ಕನಕಪುರ ಹೇಗಿತ್ತು? ಕನಕಪುರದಲ್ಲಿ ಬೀದಿ ಲೈಟ್ ಕಂಬ ಕೂಡ ಇರಲಿಲ್ಲ. ಕನಕಪುರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ವಿದ್ಯುತ್ ಕನೆಕ್ಷನ್ ಕೊಡಿಸುವಾಗ ಇವರು ಎಲ್ಲಿದ್ದರು? ಎಂದು ಡಿ.ಕೆ.ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು.
