ಬೆಂಗಳೂರು,ಜು.13- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನ್ಯ ಭಾಷಿಗರ ದಬ್ಬಾಳಿಕೆ ಮತ್ತು ವ್ಯಾಪಾರ ದಂಧೆ ನೋಡಿದರೆ ನೀವು ಬೆಚ್ಚಿ ಬೀಳುತ್ತೀರ. ಬೆಂಗಳೂರಿನ ನಾನಾ ಕಡೆಗಳಲ್ಲಿ ಕಂಡುಬರುವ ಪಾನಿಪುರಿ ಗಾಡಿಗಳು ಬಹುತೇಕ ಉತ್ತರಭಾರತದವರದ್ದೇ ಆಗಿರುತ್ತವೆೆ. ಅಂಕಿಅಂಶಗಳ ಪ್ರಕಾರ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ ಮೂಲದವರೇ ಹೆಚ್ಚಾಗಿದ್ದು,ಒಂದೇ ವ್ಯಕ್ತಿ ಸುಮಾರು 4 ಸಾವಿರ ತಳ್ಳುವ ಗಾಡಿ ಪಾನಿಪುರ ಅಂಗಡಿಗಳನ್ನು ತೆರೆದಿದ್ದು, ಪ್ರತಿದಿನ ಒಂದಕ್ಕೆ 300 ರೂ.ನಂತೆ ಬಾಡಿಗೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.
ಒಂದು ದಿನಕ್ಕೆ 300 ರೂ. ಬಾಡಿಗೆ ಎಂದರೂ ನಾಲ್ಕು ಸಾವಿರ ಗಾಡಿಗಳಿಂದ 1.20 ಲಕ್ಷ ರೂ. ದುಡಿಯುತ್ತಿದ್ದಾನೆ. ಇವೆಲ್ಲವೂ ಬಹುತೇಕ ಫುಟ್ಪಾತ್ಗಳಲ್ಲೇ ವ್ಯಾಪಾರ ನಡೆಸುತ್ತಿದ್ದು, ಇವರಿಗೆ ಹೇಳೋರು, ಕೇಳೋರು ಯಾರು ಇಲ್ಲದಂತಾಗಿದೆ.
ಇಲ್ಲಿ ಕನ್ನಡಿಗರು ಬೆರಳಣಿಕೆಯಷ್ಟಿದ್ದು, ಇಡೀ ದಂಧೆ ಅನ್ಯಭಾಷಿಗರದೇ ದರ್ಬಾರ್ ಆಗಿದೆ. ಸಚಿವ ಕೃಷ್ಣಭೈರೇಗೌಡ ಅವರು ಫುಟ್ಪಾತ್ ಒತ್ತುವರಿಯನ್ನು ತೆರವುಗೊಳಿಸುವ ದಿಟ್ಟ ನಿರ್ಧಾರ ಕೈಗೊಂಡಿರುವುದರಿಂದ ಇಂತಹ ಅಕ್ರಮಗಳು ಬೆಳಕಿಗೆ ಬರುತ್ತಿದೆ.
ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಪ್ರತಿಕ್ರಿಯಿಸಿದ್ದು, ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. ನಾವು ಕಷ್ಟಪಟ್ಟು ದುಡಿಯುವ ಹಣ ಇಂತಹ ಅನ್ಯಭಾಷಿಗರ ದಲ್ಲಾಳಿಗಳ ಪಾಲಾಗುತ್ತಿದೆ.
ಇದರ ಬಗ್ಗೆ ಸಚಿವರು ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಮುಲಾಜಿಲ್ಲದೆ ಇಂತಹ ಅಕ್ರಮ ಜಾಲವನ್ನು ಮಟ್ಟ ಹಾಕಬೇಕು. ಇದಕ್ಕೆ ಕರವೇ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ನಾರಾಯಣಗೌಡರು ತಿಳಿಸಿದ್ದಾರೆ.
