ಬೆಂಗಳೂರು, ಜು.13- ಚಿಲ್ಲರೆಯ ಕೊರತೆ ಕಾರಣಕ್ಕಾಗಿ ಪ್ರಯಾಣಿಕರಿಗೆ ಪ್ರಯಾಣದ ಅವಕಾಶವನ್ನು ನಿರಾಕರಿಸುವಂತಿಲ್ಲ ಎಂದು ಬಿಎಂಟಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಸಾರಿಗೆ ಸಚಿವ ಭೈರತಿ ಸುರೇಶ್ ಅವರು, ಮಾಸ್ಕ್ ಧರಿಸಿ ನಗರದ ಹತ್ತಕ್ಕೂ ಹೆಚ್ಚು ಮಾರ್ಗಗಳ ಬಿಎಂಟಿಸಿ ಬಸ್ನಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಪ್ರಯಾಣಿಸಿ, ರಿಯಾಲಿಟಿ ಚೆಕ್ ನಡೆಸಿದ್ದರು.
ಆ ವೇಳೆ ಕೆಲ ನಿರ್ವಾಹಕರು ಚಿಲ್ಲರೆ ಇಲ್ಲ ಎಂಬ ಕಾರಣಕ್ಕಾಗಿ ಮಾರು ವೇಷದಲ್ಲಿದ್ದ ಸಚಿವರನ್ನು ಕೆಳಗಿಳಿಯುವಂತೆ ದಬಾಯಿಸಿದ್ದರು. ಈ ಹಿನ್ನೆಲೆಯಲ್ಲಿ ನಿರ್ದಿಷ್ಟವಾದ ಸುತ್ತೋಲೆಯನ್ನು ರವಾನಿಸಲಾಗಿದೆ. ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಸೇವೆ, ಸುರಕ್ಷತೆ ಹಾಗೂ ಸಂಚಾರ ಅನುಭವವನ್ನು ಉತ್ತಮಗೊಳಿಸುವ ಉದ್ದೇಶದಿಂದ ತನ್ನ ಸಿಬ್ಬಂದಿಗೆ ಹೊಸ ನಿರ್ದೇಶನಗಳನ್ನು ಜಾರಿ ಮಾಡಿದೆ.
ಪರಿಶೀಲನೆಯ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಒಬ್ಬ ಚಾಲಕ ಮತ್ತು ಒಬ್ಬ ನಿರ್ವಾಹಕರ ವಿರುದ್ಧ ಅಮಾನತು ಕ್ರಮಕ್ಕೆ ಸಚಿವರು ಶಿಫಾರಸು ಮಾಡಿದ್ದಾರೆ.ಹೊಸ ಮಾರ್ಗಸೂಚಿಗಳ ಪ್ರಕಾರ, ಬಿಎಂಟಿಸಿ ಚಾಲಕರು ಬಸ್ಗಳನ್ನು ನಿಗದಿತ ಬಸ್ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಬೇಕು. ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರ ಜೊತೆಗೆ ಸೌಜನ್ಯದಿಂದ ಮತ್ತು ಗೌರವದಿಂದ ವರ್ತಿಸಬೇಕು ಎಂದು ಸೂಚಿಸಲಾಗಿದೆ.
ನಿರ್ವಾಹಕರು ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳಲ್ಲಿ (ಇಟಿಎಂ) ಲಭ್ಯವಿರುವ ಡೈನಾಮಿಕ್ ಕ್ಯೂಆರ್ ಕೋಡ್ ಆಧರಿತ ಯುಪಿಐ ಪಾವತಿ ಸೌಲಭ್ಯವನ್ನು ಬಳಸಲು ಪ್ರಯಾಣಿಕರನ್ನು ಉತ್ತೇಜಿಸಬೇಕು. ಚಿಲ್ಲರೆ ಹಣದ ಕೊರತೆಯಿಂದ ಯಾವುದೇ ಪ್ರಯಾಣಿಕರಿಗೆ ಪ್ರಯಾಣ ನಿರಾಕರಿಸಬಾರದು ಅಥವಾ ಬಸ್ನಿಂದ ಇಳಿಯುವಂತೆ ಒತ್ತಾಯಿಸಬಾರದು ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.
ಇದಲ್ಲದೆ, ಇಟಿಎಂ ವ್ಯವಸ್ಥೆಯಲ್ಲಿ ನಿಗದಿತ ನಿಲ್ದಾಣಗಳಾಗಿ ದಾಖಲಾಗದ ಬಸ್ ಶೆಲ್ಟರ್ಗಳನ್ನು ಗುರುತಿಸಿ ಅವುಗಳನ್ನು ವ್ಯವಸ್ಥೆಯಲ್ಲಿ ಸೇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರಿಂದ ಪದೇಪದೇ ದೂರುಗಳು ಬರುವ ಚಾಲಕರು ಮತ್ತು ನಿರ್ವಾಹಕರಿಗೆ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ಸಾಫ್್ಟ ಸ್ಕಿಲ್್ಸ ತರಬೇತಿ ನೀಡುವಂತೆ ಸೂಚಿಸಲಾಗಿದೆ.
