ಬೆಂಗಳೂರು,ಜೂ.2-ಲೋಕಭವನದಲ್ಲಿ ನಾಳೆ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಹಾಗೂ ಹಿರಿಯ ಕೆಲ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರು ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಬಂದೋಬಸ್ತ್ ಬಗ್ಗೆ ಸಲಹೆ, ಸೂಚನೆ ನೀಡಿದರು.
ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು ಹಾಗೂ ಎಲ್ಲಾ ವಿಭಾಗಗಳ ಡಿಸಿಪಿಗಳು ಪಾಲ್ಗೊಂಡಿದ್ದರು.ಲೋಕಭವನದಲ್ಲಿ ನಾಳೆ ಸಂಜೆ ನಡೆಯುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಸಣ್ಣ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಮಂತ್ರಿಯಾಗಲಿರುವ ಶಾಸಕರ ಬೆಂಬಲಿಗರು ಆಗಮಿಸುವ ಹಿನ್ನೆಲೆಯಲ್ಲಿ ಅವರುಗಳ ವಾಹನಗಳನ್ನು ನಿಲುಗಡೆ ಮಾಡಲು ಯಾವ ಸ್ಥಳಗಳಲ್ಲಿ ಅವಕಾಶ ಕಲ್ಪಿಸಬೇಕು ಎಂಬುವುದರ ಬಗ್ಗೆಯೂ ಸಹ ಸಲಹೆ ನೀಡಲಾಯಿತು.
ವಿಧಾನಸೌಧ ಹಾಗೂ ಲೋಕಭವನ ಸುತ್ತ ಯಾವುದೇ ರೀತಿ ಸಂಚಾರ ದಟ್ಟಣೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ಸಭೆಯಲ್ಲಿದ್ದ ಸಂಚಾರ ವಿಭಾಗದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಾಳಿನ ಬಂದೋಬಸ್ತ್ನಲ್ಲಿ ನಿಯೋಜನೆಗೊಂಡಿರುವ ಎಸಿಪಿಗಳು, ಇನ್್ಸಪೆಕ್ಟರ್ಗಳು, ಸಬ್ಇನ್್ಸಪೆಕ್ಟರ್ಗಳು ಹಾಗೂ ಸಿಬ್ಬಂದಿಗಳು ಲೋಕಭವನ ಬಳಿಯ ನೆಹರು ತಾರಾಲಯ ಮುಂಭಾಗ ಇಂದು ಸಮಾವೇಶಗೊಂಡಿದ್ದರು. ನಾಳೆ ಯಾವ ಯಾವ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಬೇಕೆಂಬುವದರ ಬಗ್ಗೆ ಪೂರ್ವಸಿದ್ಧತಾ ಕಾರ್ಯದಲ್ಲಿ ವಿವರಗಳನ್ನು ನೀಡಲಾಯಿತು.
