ಬೆಂಗಳೂರು, ಫೆ.2- ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ದ ಪದೇ ಪದೇ ಕಾಲು ಕೆರೆದು ಜಗಳವಾಡುತ್ತಿದ್ದು, ದ್ವೇಷದ ಭಾವನೆ ಸೃಷ್ಟಿಸುತ್ತಿದೆ. ಇದರಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿದ್ದರಿಂದಾಗಿ ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೊ ರೈಲು ಅನುಷ್ಠಾನಕ್ಕೆ ಬಂದವು. ಕಾಲು ಕೆರೆದು ಜಗಳವಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದರು.
ಕಾಂಗ್ರೆಸ್ನವರಿಗೆ ರಾಮನ ಕಂಡರೆ ಸಹ್ಯವಾಗುವುದಿಲ್ಲ. ಅದಕ್ಕಾಗಿ ವಿಕಸಿತ ಭಾರತ, ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ವಿಬಿಜಿ ರಾಮ್ ಜಿ) ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ 12 ಪುಟಗಳಷ್ಟು ವಿಬಿಜಿ ರಾಮ್ಜಿ ಯೋಜನೆಯನ್ನು ಟೀಕಿಸಲು ಬಳಕೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಬಿ ಜಿ ರಾಮ್ಜಿ ಯಲ್ಲಿರುವುದು ಶ್ರೀರಾಮನ ಹೆಸರಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಆಕ್ಷೇಪಿಸಿದರು. ಸಚಿವ ಭೈರತಿ ಸುರೇಶ್ ಮಾತನಾಡಿ, ಬಿಜೆಪಿಯವರು ಎಲ್ಲದಕ್ಕೂ ದೇವರನ್ನೇ ಎಳೆದು ತರುವುದು ಏಕೆ ಎಂದು ಪ್ರಶ್ನಿಸಿದರು.
ಬಿಜೆಪಿಯ ಸುರೇಶ್ಕುಮಾರ್, ರಾಜ್ಯಪಾಲರ ಭಾಷಣದಲ್ಲಿ ವಿಬಿಜಿ ರಾಮ್ ಜಿ ಅನ್ನು ಕಾಂಗ್ರೆಸ್ ಸರ್ಕಾರ ವಿಬಿ ಗ್ರಾಮ್ ಜೀ ಎಂದು ಬದಲಾವಣೆ ಮಾಡಿದೆ. ರಾಮನ ಕಂಡರೆ ಇವರಿಗೆ ಸಹನೆ ಇಲ್ಲ ಎಂದರು. ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲೇ ರಾಮ ಇದ್ದಾನೆ ಎಂದು ಭೈರತಿ ಸುರೇಶ್ ಹೇಳಿದಾಗ, ಅಶೋಕ್ ಅವರು ಇವರೇ ಆಗಿದ್ದರೆ ರಾಮನ ಹೆಸರು ಇಟ್ಟುಕೊಳ್ಳುತ್ತಿರಲಿಲ್ಲ. ಅವರ ತಂದೆ ನಾಮಕರಣ ಮಾಡಿದ್ದಕ್ಕೆ ಆ ಹೆಸರು ಉಳಿದಿದೆ ಎಂದು ಅಶೋಕ್ ಲೇವಡಿ ಮಾಡಿದರು.
ರಾಮನಗರದ ಹೆಸರನ್ನು ಬದಲಾವಣೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ರಾಮನ ಮೇಲಿನ ದ್ವೇಷವನ್ನು ಮತ್ತೊಮೆ ಸಾಬೀತುಪಡಿಸಿದೆ ಎಂದು ಹೇಳಿದರು.
ಆಗ ಮತ್ತೆ ಎದ್ದು ನಿಂತ ರಾಮಲಿಂಗಾರೆಡ್ಡಿ ಅವರು, ರಾಮನಗರ ಎಲ್ಲಿಗೂ ಹೋಗಿಲ್ಲ. ಅಲ್ಲಿಯೇ ಎಂದು ಸಮರ್ಥಿಸಿಕೊಳ್ಳು ಪ್ರಯತ್ನ ಮಾಡಿದರು. ರಾಮಲಿಂಗಾರೆಡ್ಡಿ ಅವರು ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದರು. ಈಗ ಅವರು ಯಾವ ಜಿಲ್ಲೆಯ ಉಸ್ತುವಾರಿಯಾಗಿದ್ದಾರೆ? ರಾಮನಗರ ತಾಲ್ಲೂಕಾಗಿ ಉಳಿದಿದೆ. ಜಿಲ್ಲೆಯಾಗಿ ಅಲ್ಲ ಎಂದು ಅಶೋಕ್ ತಿರುಗೇಟು ನೀಡಿದರು. ಇದು ಕೆಲಕಾಲ ಚರ್ಚೆಗೆ ಗ್ರಾಸವಾಯಿತು.
ಕಾಂಗ್ರೆಸ್ ಸಂವಿಧಾನ ವಿರೋಧಿ ನಡೆ:
ಕಾಂಗ್ರೆಸ್ ಪಕ್ಷ ಸಂವಿಧಾನಬದ್ಧವಾಗಿ ನಡೆದುಕೊಳ್ಳುವುದಾಗಿ ಹೇಳುತ್ತಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿಯೇ ವರ್ತಿಸುತ್ತದೆ. ಅನಂತಕುಮಾರ್ ಹೆಗಡೆ ಅವರ ಹೇಳಿಕೆಯನ್ನು ತಪ್ಪಾಗಿ ಚಿತ್ರಿಸಿ ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು. ಅವರು ಸಂವಿಧಾನ ಬದಲಾಯಿಸುತ್ತೇವೆ ಎಂದಿರಲಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಅತಿಹೆಚ್ಚು ಸಂವಿಧಾನ ತಿದ್ದುಪಡಿಯಾಗಿದೆ. ನೆಹರು ಪ್ರಧಾನಿಯಾಗಿದ್ದಾಗ 17 ಬಾರಿ, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ 22 ಬಾರಿ, ರಾಜೀವ್ಗಾಂಧಿ ಅವಧಿಯಲ್ಲಿ 4 ಬಾರಿ ಸೇರಿ ಒಟ್ಟು 72 ಬಾರಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ.
ಬಿಜೆಪಿ ಆಡಳಿತದ ಅವಧಿಯಲ್ಲಿ 22 ಬಾರಿ ತಿದ್ದುಪಡಿಯಾಗಿದೆ.ಅ ಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ 14 ಬಾರಿ, ನರೇಂದ್ರಮೋದಿ ಅವಧಿಯಲ್ಲಿ ತ್ರಿಬಲ್ ತಲಾಕ್, ಕಾಶೀರದ 370 ಹಾಗೂ ಮೀಸಲಾತಿ ಮುಂದುವರೆಸಲು ಸೇರಿ 8 ಬಾರಿ ಸಂವಿಧಾನ ತಿದ್ದುಪಡಿಯಾಗಿದೆ ಎಂದು ವಿವರಿಸಿದರು. ತಿದ್ದುಪಡಿಗೂ ಬದಲಾವಣೆಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು.
ಅಶೋಕ್ ಚರ್ಚೆ ಮುಂದುವರೆಸಿ, ನೆಹರು ಅವರು ಭಾರತೀಯರಿಗೆ ಎಲ್ಲದರಲ್ಲೂ ದೇವರನ್ನು ಕಾಣುವ ಅಭ್ಯಾಸವಿದೆ. ಸಂವಿಧಾನವನ್ನು ಕೊಲ್ಲಬೇಕಾದರೆ ಅದನ್ನು ಪರಮಪವಿತ್ರ ಮಾಡಿ, ನಿರಂತರವಾಗಿ ಜಾರಿ ಮಾಡಬೇಕಾದರೆ ಕಾಲಕಾಲಕ್ಕೆ ಬದಲಾವಣೆ ಮಾಡಬೇಕೆಂದು ಹೇಳಿದ್ದರು. ಅಂಬೇಡ್ಕರ್ ಅವರು ಸಂವಿಧಾನವನ್ನು ಸುಡುತ್ತೇನೆ ಎಂದಿದ್ದರು. 1955ರ ಮಾರ್ಚ್ 15ರಂದು ಲೋಕಸಭೆಯಲ್ಲಿ ಸಂಸದ ಡಾ.ಅನೂಪ್ ಸಿಂಗ್, ಅಂಬೇಡ್ಕರ್ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಿ, ಸಂವಿಧಾನ ಸುಡುತ್ತೇನೆ ಎಂದಿದ್ದು ಸರಿಯೇ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಬಾಬಾ ಸಾಹೇಬ್, ತಮ ಹೇಳಿಕೆಗೆ ಸ್ಪಷ್ಟನೆ ನೀಡಲು ತರಾತುರಿಯಲ್ಲಿ ಸಾಧ್ಯವಾಗಿರಲಿಲ್ಲ. ಇಲ್ಲಿ ಪ್ರಶ್ನೆ ಕೇಳಿದ್ದರಿಂದಾಗಿ ಅವಕಾಶ ಸಿಕ್ಕಿದೆ.
ದೇವರು ನೆಲೆಸಲಿ ಎಂದು ದೇವಸ್ಥಾನ ಕಟ್ಟುತ್ತೇವೆ. ಅಲ್ಲಿ ದೇವರಿಗಿಂತ ಮೊದಲು ಪಿಶಾಚಿಗಳು ಸೇರಿಕೊಂಡರೆ ಅಂಥ ದೇವಸ್ಥಾನ ನಮಗೆ ಬೇಡ. ಅದನ್ನು ಕೆಡವಲೇ ಬೇಕಾಗುತ್ತದೆ. ಅದಕ್ಕಾಗಿ ಸಂವಿಧಾನ ಸುಡುತ್ತೇನೆ ಎಂದು ಹೇಳಿದ್ದಾಗಿ ಅಂಬೇಡ್ಕರ್ ಸ್ಪಷ್ಟಪಡಿಸಿದ್ದಾರೆ ಎಂದು ಅಶೋಕ್ ವಿವರಿಸಿದರು. ಮಹಾತ ಗಾಂಧೀಜಿ ಅವರ ಹೆಸರನ್ನು ಕೆಲವೇ ಯೋಜನೆಗಳಿಗೆ ಇಡಲಾಗಿದೆ. ಆದರೆ ನಕಲಿ ಗಾಂಧಿಗಳ ಹೆಸರನ್ನು ಇಟ್ಟಿರುವ ಪಟ್ಟಿ ತಮ ಬಳಿ ಇದ್ದು ಅದು ಬಹಳ ಉದ್ದವಿದೆ ಎಂದು ಹೇಳಿದರು.
