Saturday, July 27, 2024
Homeರಾಜ್ಯನೋಡ್ತಾ ಇರಿ, ಸಿದ್ರಾಮಣ್ಣನ ವಿರುದ್ದವೂ ಸಿಡಿ ಬಿಡುತ್ತಾರೆ : ರಾಜೂ ಗೌಡ ಸ್ಪೋಟಕ ಹೇಳಿಕೆ

ನೋಡ್ತಾ ಇರಿ, ಸಿದ್ರಾಮಣ್ಣನ ವಿರುದ್ದವೂ ಸಿಡಿ ಬಿಡುತ್ತಾರೆ : ರಾಜೂ ಗೌಡ ಸ್ಪೋಟಕ ಹೇಳಿಕೆ

ಯಾದಗಿರಿ,ಮೇ.3- ನೋಡುತ್ತಿರಿ.. ಲೋಕಸಭಾ ಚುನಾವಣೆ ಮುಗಿಯಲಿ, ಸಿದ್ರಾಮಣ್ಣನ ವಿರುದ್ದವೂ ಏನಾದರೂ ಸಿಡಿ ಬಿಡುತ್ತಾರೆ. ಅವರ ಜೊತೆ ಜಾಸ್ತಿ ಓಡಾಡೋಕೆ ಹೋಗಬೇಡಿ ಎಂದು ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ರಾಜೂ ಗೌಡ ಪೆನ್‌ ಡ್ರೈವ್‌ ವಿದ್ಯಮಾನದ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ನೋಡುತ್ತಿರಿ.. ಲೋಕಸಭಾ ಚುನಾವಣೆ ಮುಗಿಯಲಿ, ಸಿದ್ರಾಮಣ್ಣನ ವಿರುದ್ಧವೂ ಏನಾದರೂ ಸಿಡಿ ಬಿಡುತ್ತಾರೆ. ಅವರ ಜೊತೆ ಜಾಸ್ತಿ ಓಡಾಡೋಕೆ ಹೋಗಬೇಡಿ ಎಂದು ಸಿಎಂಗೆ ಎಚ್ಚರಿಸಿದ್ದಾರೆ.

ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿ ಮತಯಾಚನೆ ಮಾಡಿದ ಅವರು, ಸಿದ್ದರಾಮಯ್ಯನವರಿಗೂ ಈ ವಿಚಾರಗಳು ಗೊತ್ತು, ಆದರೆ ಮೇಲಿನವರ ಆದೇಶ ಪಾಲಿಸಬೇಕಾಗುತ್ತದೆ. ಡಿಕೆಶಿ ತಮ್ಮ ಎದುರಾಳಿಗಳನ್ನು ಹಣೆಯಲು ಯಾವ ಅಸ್ತ್ರ ಬಳಸಬೇಕು, ಯಾವ ಸಿಡಿ ಬಿಡಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳಲ್ಲಿ ನಾವು ನೋಡುತ್ತಿದ್ದೇವೆಯೇ ಹೊರತು ಈ ಭಾಗದಲ್ಲಿ ಸಿಡಿ ಸದ್ದು ಮಾಡುತ್ತಿಲ್ಲ. ಪ್ರಜ್ವಲ್‌ ರೇವಣ್ಣ ಅಂತ ಅಲ್ಲಾ, ಯಾರೇ ಮಾಡಲಿ ತಪ್ಪುತಪ್ಪೇ.. ಇದು ಸ್ಯಾಡಿಸ್‌್ಟಗಳು ಮಾಡುವ ಕೆಲಸ. ಮೊನ್ನೆ ರಾಹುಲ್‌ ಗಾಂಧಿ , ಡಿಕೆಶಿ ಮುಖ್ಯಮಂತ್ರಿ ಮತ್ತು ಸಿದ್ದರಾಮಯ್ಯ ರಾಜ್ಯಾಧ್ಯಕ್ಷ ಎಂದು ಹೇಳಿದ್ದರು. ಅವರ ಮನಸ್ಸಿನಲ್ಲೂ ಅದೇ ಇದೆ, ಡಿಕೆಶಿ ಅಣ್ಣ 24 ಗಂಟೆ ರಾಜಕೀಯ ಮಾಡುವ ವ್ಯಕ್ತಿ. ಮುಖ್ಯಮಂತ್ರಿ ಆಗುವುದಕ್ಕೆ ಬೇಕಾದನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.

ರಮೇಶ್‌ ಜಾರಕಿಹೊಳಿ ಮತ್ತು ಪ್ರಜ್ವಲ್‌ ರೇವಣ್ಣ ವಿಚಾರದಲ್ಲಿ ಯಾವಯಾವ ಅಸ್ತ್ರವನ್ನು ಉಪಯೋಗಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನೋಡುತ್ತಿರಿ.. ಸಿದ್ರಾಮಣ್ಣನ ವಿರುದ್ದವೂ ಯಾವುದಾದರೂ ಸಿಡಿ ಬಿಡಬಹುದು ಎಂದು ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಗುರಿಯಾಗುವ ಸಾಧ್ಯತೆಯಿದೆ.

ಎಂಪಿ ಚುನಾವಣೆ ಆದ ಮೇಲೆ ಸಿದ್ದಾರಾಮಣ್ಣನ ಮೇಲೆ ಏನಾದರೂ ಮಾಡಿ ಅವರನ್ನು ಬ್ಲಾಕ್‌ ಮಾಡಿಸಿ ಬಿಡುತ್ತಾರೆ. ಕೆಲವರನ್ನು ಬೆದರಿಸುವುದು, ಇನ್ನಷ್ಟು ಜನರನ್ನು ಸಿಡಿ ತೋರಿಸಿ ಭಯ ಪಡಿಸುವುದು ಅವರ ರಾಜಕೀಯ ಶೈಲಿ ಎಂದು ರಾಜೂ ಗೌಡ ಹೇಳಿದ್ದಾರೆ.

ವೋಟಿಂಗ್‌ ಆಗುವ ಎರಡು ದಿನ ಮುನ್ನ ಸಿಡಿ ಹೊರಗೆ ಬಿಟ್ಟರು, ಅವರ ಕೈಯಲ್ಲಿ ಮುಂಚೆನೇ ಪೆನ್‌ ಡ್ರೈವ್‌ ಇತ್ತು ತಾನೆ. ಮುಂಚೆನೇ ಬಿಡಬಹುದಾಗಿತ್ತು, ಮಹಿಳಾ ಸಂತ್ರಸ್ತರ ಕಷ್ಟಕ್ಕೆ ಹೋಗೋಣ ಎನ್ನುವುದು ಅವರಿಗಿಲ್ಲ, ಮೊದಲು ರಾಜಕೀಯ ಲಾಭ ಆಗಬೇಕು. ಸಿದ್ರಾಮಣ್ಣ ನಿಮಗೆ ಬಿಜೆಪಿ ಶತ್ರುವಲ್ಲ, ರಾಜೂ ಗೌಡ ಶತ್ರುವಲ್ಲ, ಪಕ್ಕದಲ್ಲೇ ಇರುವ ಡಿಕೆ ಅಣ್ಣ ಎಂದು ನರಸಿಂಹ ನಾಯಕ್‌ ಗುರುತರ ಆರೋಪವನ್ನು ಮಾಡಿದ್ದಾರೆ.

ಸೆರಗೊಡ್ಡಿ ಮತ ಕೇಳಲು ನನಗೆ ತಾಯಿ ಇಲ್ಲ, ತಂದೆಯೂ ಇಲ್ಲ. ನನ್ನ ಪಾಲಿಗೆ ಕಾರ್ಯಕರ್ತರೇ ತಂದೆ-ತಾಯಂದಿರು, ನೀವೇ ಆಶೀರ್ವಾದ ಮಾಡಬೇಕು. ಎಲ್ಲರೂ ಆಶೀರ್ವಾದ ಮಾಡಬೇಕೆಂದು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿದರು. ನನ್ನ ತಾಯಿಯನ್ನು ಕಳೆದುಕೊಂಡಾಗ ನಾನು ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಾಯಿಯನ್ನು ಕಳೆದುಕೊಂಡಾಗಲೂ ಕೆಲಸ ನಿಲ್ಲಿಸಿಲ್ಲ. ಕೊರೋನಾ ಸಂದರ್ಭದಲ್ಲಿ ನಿಮ್ಮನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

ರಾಜಾ ವೆಂಕಟಪ್ಪ ನಿಧನದಿಂದ ತೆರವಾಗಿದ್ದ ಸುರುಪುರ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಮೇ. 7 ರಂದು ಮತದಾನ ನಡೆಯಲಿದೆ. ಬಿಜೆಪಿಯಿಂದ ರಾಜೂ ಗೌಡ ಸ್ಪರ್ಧಿಸಿದರೆ, ಇತ್ತ ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕರಿಗೆ ಟಿಕೆಟ್‌ ನೀಡಿದೆ.

RELATED ARTICLES

Latest News