ನವದೆಹಲಿ, ಮೇ 18: ಇತ್ತಿಚೆಗೆ ಜಗತ್ತನ್ನು ಕಾಡುತ್ತಿರುವ ಸರಣಿ ಬಿಕ್ಕಟ್ಟುಗಳಿಂದ ಜಾಗತಿಕ ಸಮುದಾಯ ಪಾಠ ಕಲಿಯದಿದ್ದರೆ, ವಿಶ್ವದಲ್ಲಿ ಮತ್ತೊಮ್ಮೆ ಭೀಕರ ಬಡತನ ತಲೆದೂರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಕಳೆದ ಕೆಲವು ವರ್ಷಗಳನ್ನು ಡಿಸಾಸ್ಟರ್ ಡಿಕೇಡ್ ಎಂದು ಬಣ್ಣಿಸಿರುವ ಅವರು, ಜಾಗತಿಕ ಸ್ಥಿರತೆಗೆ ಎದುರಾಗಿರುವ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ನವದೆಹಲಿಯಲ್ಲಿ ನಡೆದ ಆರ್ಥಿಕ ತಜ್ಞರ ಜತೆ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಆರ್ಥಿಕತೆಯ ಸಧ್ಯದ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಕೋವಿಡ್ ಮಹಾಮಾರಿ ಜಾಗತಿಕವಾಗಿ ಕೋಟ್ಯಂತರ ಜನರ ಜೀವನ ಮತ್ತು ದೇಶಗಳ ಆರ್ಥಿಕತೆಯನ್ನು ಇದು ಧ್ವಂಸಗೊಳಿಸಿತ್ತು.ಭೂರಾಜಕೀಯ ಯುದ್ಧಗಳಿಂದ ಜಗತ್ತಿನ ವಿವಿಧೆಡೆ ನಡೆಯುತ್ತಿರುವ ಇಂಧನ ಮತ್ತು ಆಹಾರ ಬಿಕ್ಕಟ್ಟು ಕಳೆದ ಒಂದು ದಶಕ ನಿಜಕ್ಕೂ ದುರಂತದ ದಶಕವಾಗಿದೆ ಎಂದಿದ್ದಾರೆ.
ಸೂಕ್ತ ನೀತಿಗಳು, ಬಲಿಷ್ಠ ಆಡಳಿತ ಮತ್ತು ನಿರಂತರ ಆರ್ಥಿಕ ಸುಧಾರಣೆಗಳು ಇಲ್ಲದಿದ್ದರೆ , ಕಳೆದ ಹತ್ತು ವರ್ಷಗಳಲ್ಲಿ ಬಡತನ ನಿರ್ಮೂಲನೆಯಲ್ಲಿ ಸಾಧಿಸಿದ ಪ್ರಗತಿಯು ಉಲ್ಟಾ ಆಗುವುದು ಗ್ಯಾರಂಟಿ. ಜಗತ್ತು ಮತ್ತೆ ಬಡತನದ ಕೂಪಕ್ಕೆ ತಳ್ಳಲ್ಪಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಹೇಗೆ ಚೇತರಿಸಿಕೊಂಡಿತು ಎಂಬುದನ್ನು ಮೋದಿ ವಿವರಿಸಿದರು.
ಸಮಯೋಚಿತ ನೀತಿಗಳು ಮತ್ತು ಆರ್ಥಿಕ ಸುಧಾರಣೆಗಳ ಕಾರಣದಿಂದಾಗಿ ಭಾರತವು ಕೋವಿಡ್ ಆಘಾತದಿಂದ ಹೊರಬಂದಿದ್ದಲ್ಲದೆ, ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ ಎಂದರು. ಭವಿಷ್ಯದ ಆಘಾತಗಳನ್ನು ತಡೆಯಲು ಜಾಗತಿಕ ನಾಯಕರು ಸ್ವಾವಲಂಬನೆ (ಆತ್ಮನಿರ್ಭರತೆ), ನಾವೀನ್ಯತೆ , ಕೌಶಲ್ಯಾಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು.
