ಬೆಂಗಳೂರು. ಏ.21-ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಹಣಕ್ಕಾಗಿ ಲೋನ್ ತೆಗೆದುಕೊಂಡಿದ್ದ ಖಾಸಗಿ ಕಂಪನಿಯ ಉದ್ಯೋಗಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಟೆಕ್ ಪದವೀಧರನಾಗಿರುವ ಒಡಿಶಾ ಮೂಲದ ಚಿನಯ್ ಪ್ರಸಾದ್ ಸಾಹೋ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದ ಈತ ನಂತರ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದಾನೆ. ಈತ ಅಕ್ಷಯ ನಗರದಲ್ಲಿ ವಾಸವಾಗಿದ್ದರು.
ಈತ ಸ್ನೇಹಿತೆ ಜೊತೆ ಇದೇ ಮನೆಯಲ್ಲಿ ಲಿವಿಂಗ್-ಟು-ಗೆದರ್ನಲ್ಲಿದ್ದನು. ಚಿನಯ್ಗೆ ಆನ್ಲೈನ್ ಗೇಮ್ ಚಟ. ಆರ್ಥಿಕ ತೊಂದರೆಯಿಂದಾಗಿ ಆಪ್ಗಳಲ್ಲಿ ಲೋನ್ ತೆಗೆದುಕೊಂಡಿದ್ದನು. ಆದರೆ ಲೋನ್ ಹಣ ಕಟ್ಟಿರಲಿಲ್ಲ. ಹಣ ವಾಪಸ್ ಕೊಡುವಂತೆ ಒತ್ತಡವಿತ್ತು.
ಈ ನಡುವೆ ಚಿನಯ್ ಮೊಬೈಲ್ಗೆ ಆತನದ್ದೇ ಖಾಸಗಿ ಫೋಟೋಗಳು ಬಂದಿದ್ದವು. ಇನ್ನೂ ಹಲವು ಖಾಸಗಿ ಫೋಟೋಗಳು ಇವೆ. ಅವುಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಬಾರದು ಎಂದರೆ ನಾವು ಕೇಳಿದಷ್ಟು ಹಣ ಕೊಡಬೇಕೆಂದು ಸೈಬರ್ ವಂಚಕರು ಬೆದರಿಕೆ ಹಾಕಿದ್ದರು ಎಂದು ಸಹ ಗೊತ್ತಾಗಿದೆ.
ನಾಲ್ಕು ದಿನಗಳ ಹಿಂದೆ ಕಸ ಹಾಕಲು ಚಿನಯ್ ಮನೆಯಿಂದ ಹೊರಗೆ ಹೋಗಿದ್ದಾಗ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಈತನನ್ನು ಯಾರಾದರೂ ಅಪಹರಿಸಿದ್ದಾರೆಯೇ ಅಥವಾ ಈತನೇ ಮನೆ ಬಿಟ್ಟು ಹೋಗಿದ್ದಾನೆಯೇ ಎಂಬ ಅನುಮಾನ ಮೂಡಿದೆ.
ಹೊರಗೆ ಹೋದಾಗ ಏನನ್ನೂ ತೆಗೆದುಕೊಂಡು ಹೋಗಿಲ್ಲ. ಆತನ ಮೊಬೈಲ್, ಬೈಕ್, ಎಟಿಎಂ ಕಾರ್ಡ್ ಎಲ್ಲವನ್ನೂ ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಕಾರ್ಯ ಮುಂದುವರೆದಿದೆ.
