ಬೆಂಗಳೂರು,ಮೇ 25-ವಿನಾಕಾರಣ ಆಟೋ ಚಾಲಕನೊಂದಿಗೆ ಜಗಳ ತೆಗೆದು ಡ್ರಾಗರ್ನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಾಣವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.ಬಾಗಲೂರಿನ ರಜಾಕ್ಸಾಬ್ಪಾಳ್ಯ ನಿವಾಸಿ ಸೈಯದ್ ಶಫೀ (36) ಕೊಲೆಯಾದ ಆಟೋ ಚಾಲಕ.
ಸೈಯದ್ ಶಫೀ ಬಾಡಿಗೆ ಆಟೋ ಪಡೆದು ಚಾಲನೆ ಮಾಡುತ್ತಿದ್ದರು. ನಿನ್ನೆ ಬಾಡಿಗೆಗೆ ಬಂದಿದ್ದ ಸೈಯದ್ ಶಫೀ ತನ್ನ ಸ್ನೇಹಿತನನ್ನು ಆಟೋದಲ್ಲಿ ಕರೆದುಕೊಂಡು ಅಬ್ಬಿಗೆರೆ ಮುಖ್ಯ ರಸ್ತೆಯ ಚಿಕ್ಕಬಾಣವಾರ ಕೆರೆ ಸಮೀಪದ ಮೀನಾಬಾರ್ ಮುಂಭಾಗ ಹೋಗಿ ಆಟೋ ನಿಲ್ಲಿಸಿಕೊಂಡು ಇಬ್ಬರು ಮಾತನಾಡತ್ತಾ ಆಟೋದೊಳಗೆ ಕುಳಿತ್ತಿದ್ದರು.
ತಡರಾತ್ರಿ 11.30 ರ ಸುಮಾರಿನಲ್ಲಿ ಬಾರ್ನೊಳಗಿಂದ ಮದ್ಯಪಾನ ಮಾಡಿ ಆರೋಪಿ ದರ್ಶನ್ ಅಲಿಯಾಸ್ ದಾಸ ಹಾಗೂ ಆತನ ಇಬ್ಬರು ಸಹಚರರು ಮೂತ್ರ ವಿಸರ್ಜನೆಗಾಗಿ ಹೊರಗೆ ಬಂದಿದ್ದಾರೆ.
ಆ ಸಂದರ್ಭದಲ್ಲಿ ಆಟೋದಲ್ಲಿ ಕುಳಿತಿದ್ದ ಸೈಯದ್ ಶಫೀಯನ್ನು ಆರೋಪಿ ದರ್ಶನ್ ನೋಡಿ ನೀನು ನನ್ನನ್ನು ಗುರಾಯಿಸುತ್ತಿದ್ದೀಯ ಎಂದು ಜಗಳ ತೆಗೆದಿದ್ದಾನೆ.ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಆ ವೇಳೆ ತನ್ನ ಬಳಿ ಇದ್ದ ಡ್ರಾಗರ್ನಿಂದ ಶಫೀ ಅವರ ಕುತ್ತಿಗೆಗೆ ಇರಿದಿದ್ದಾನೆ.
ಈ ಘಟನೆಯಿಂದ ಹೆದರಿದ ಶಫೀ ಸ್ನೇಹಿತ ಆರೋಪಿಯಿಂದ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಹೋಗಿದ್ದಾನೆ.
ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ತೀವ್ರ ರಕ್ತ ಸೋರಿಕೆಯಿಂದ ಸೈಯದ್ ಶಫೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ತನ್ನ ಸಹಚರರ ಜೊತೆ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಚಿಕ್ಕಬಾಣವಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಶಫೀ ಅವರ ಸಂಬಂಧಿ ಮಹಮದ್ ನಯಾಜ್ ಎಂಬುವವರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.ತನ್ನದಲ್ಲದ ತಪ್ಪಿಗೆ ಆಟೋ ಚಾಲಕ ವಿನಾಕಾರಣ ಜೀವ ಕಳೆದುಕೊಂಡಿದ್ದು, ಇಂತಹ ಪುಂಡರನ್ನು ಪೊಲೀಸರು ಮಟ್ಟಹಾಕಬೇಕಿದೆ.
