ಬೆಂಗಳೂರು, ಜೂ.2- ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರೈತರ ಪಾಲಿಗೆ ವರದಾನವಾಗಬೇಕಿದ್ದ ವೆಂಕಟೇಶ್ವರ ಏತ ನೀರಾವರಿ ಯೋಜನೆ ಇಂದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿತನದಿಂದಾಗಿ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ .ಅಶೋಕ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಸಾಮಾಜಿಕ ಜಾಲ ತಾಣ ಎಕ್್ಸ ನಲ್ಲಿ ಸರ್ಕಾರದ ವಿರುದ್ದ ಪೋಸ್ಟ್ ಮಾಡಿರುವ ಅವರು, 174 ಕೋಟಿ ರೂ. ಲೂಟಿಯಾದರೂ ಹರಿಯಲಿಲ್ಲ ಒಂದು ಹನಿ ನೀರು! ಬರೊಬ್ಬರಿ 174.42 ಕೋಟಿ ರೂಪಾಯಿ ಸಾರ್ವಜನಿಕರ ಹಣ ನೀರಾವರಿ ಹೆಸರಿನಲ್ಲಿ ವೆಚ್ಚವಾಗಿ ಎರಡೂವರೆ ವರ್ಷಗಳೇ ಕಳೆದರೂ ರೈತರ ಜಮೀನಿಗೆ ಹರಿದಿದ್ದು ಮಾತ್ರ ಶೂನ್ಯ ಹನಿ ನೀರು! ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರೇ, ಎಲ್ಲಿಗೆ ಹೋಯಿತು 174 ಕೋಟಿ ರೂಪಾಯಿ ಹಣ?, ಕೃಷ್ಣಾ ನದಿಯಿಂದ 0.75 ಟಿಎಂಸಿಯಷ್ಟು ನೀರನ್ನು ಬಳಸಿಕೊಂಡು ಸುಮಾರು 17,991 ಎಕರೆ (7,200 ಹೆಕ್ಟೇರ್) ಒಣ ಭೂಮಿಗೆ ನೀರುಣಿಸುವ ಭವ್ಯ ಆಶ್ವಾಸನೆ ನೀಡಿದ್ದರಲ್ಲ, ಆ ನೀರೆಲ್ಲಾ ನಿಮ್ಮ ಭ್ರಷ್ಟಾಚಾರದ ಜೇಬಿಗೆ ಹರಿದುಹೋಯಿತೇ?, ಕುಲಹಳ್ಳಿ, ಪ್ರಸಿದ್ಧ ಜಕಾವೆಲ್ ಬಳಿ ನೀರು ಪೂರೈಕೆ ಮಾಡುವ ನಾಟಕವಾಡಿದ ಈ ಸರ್ಕಾರ, ಜಮೀನು ಕಳೆದುಕೊಂಡ ಬಡ ರೈತರಿಗೆ ಇನ್ನೂ ಸೂಕ್ತ ಪರಿಹಾರ ಧನವನ್ನೇ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.
