ಬೆಂಗಳೂರು, ಜೂ. 16- ವಿಧಾನ ಪರಿಷತ್ ಚುನಾವಣೆಯ ಬಳಿಕ ನಡೆಯಬಹುದಾದ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ರೆಸಾರ್ಟ್ ವಾಸ್ತವ್ಯದ ವೇಳೆ ಚರ್ಚೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ನ ಎಲ್ಲಾ ಶಾಸಕರು ಇಂದಿನಿಂದ ಎರಡು ದಿನಗಳ ಕಾಲ ರೆಸಾರ್ಟ್ನಲ್ಲೇ ತಂಗಲಿದ್ದು, ಜೂನ್ 18ರಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ನೇರವಾಗಿ ಆಗಮಿಸಿ ಮತ ಚಲಾಯಿಸಲಿದ್ದಾರೆ.
ರೆಸಾರ್ಟ್ನಲ್ಲಿ ಶಾಸಕರ ಜೊತೆ ಹಿರಿಯ ನಾಯಕರು ಮುಕ್ತ ಮಾತುಕತೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಿರಿಯ ನಾಯಕರು ರೆಸಾರ್ಟ್ನಲ್ಲಿ ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಮುಂದಿನ ಎರಡು ವರ್ಷಗಳ ಆಡಳಿತ, ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆಯಾಗಲಿದೆ.
ಸಚಿವ ಸಂಪುಟ ಸೇರಲು ಬಹಳಷ್ಟು ನಾಯಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಅಂತಹ ಶಾಸಕರ ಜೊತೆ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯ ನಾಯಕರು ಸಭೆ ನಡೆಸಿ ಸಂಪುಟ ಸೇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕೇವಲ 20 ಜನರಿಗೆ ಮಾತ್ರ ಸಂಪುಟ ಸೇರಲು ಅವಕಾಶವಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಅವರ ಜೊತೆ ಚರ್ಚೆ ನಡೆಸಿ ಪರ್ಯಾಯ ಸ್ಥಾನಮಾನಗಳಿಗೆ ಮನವೊಲಿಸುವ ಸಾಧ್ಯತೆ ಇದೆ.
ಇದೇ ವೇಳೆ ನಿಗಮ-ಮಂಡಳಿಗಳ ನೇಮಕಾತಿ ಕುರಿತಂತೆ ಚರ್ಚೆಗಳಾಗಲಿವೆ. ಸಂಪುಟ ಸೇರಲು ಸಾಧ್ಯವಿಲ್ಲದ ಕೆಲ ಶಾಸಕರುಗಳಿಗೆ ಪ್ರಮುಖ ನಿಗಮ ಮಂಡಳಿಗಳ ಜವಾಬ್ದಾರಿಯನ್ನು ವಹಿಸಲು ನಿರ್ಧರಿಸಲಾಗಿದೆ. ವ್ಯಕ್ತಿಗತ ಚರ್ಚೆಯ ವೇಳೆ ಕೆಲವು ಶಾಸಕರಿಗೆ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವಂತೆ ಮನವೊಲಿಸುವ ಸಾಧ್ಯತೆಗಳಿವೆ.
