ಚಿಕ್ಕಮಗಳೂರು, ಜೂ.22– ಮೆಸ್ಕಾಂ ನೌಕರರೊಬ್ಬರ ಮೊಬೈಲ್ ಕಳವು ಮಾಡಿದ ಖದೀಮರು ಆ ಮೊಬೈಲ್ ಬಳಸಿಕೊಂಡು ಖಾತೆಯಲ್ಲಿದ್ದ ಹಣವನ್ನು ಖಾಲಿ ಮಾಡಿರುವ ಘಟನೆ ಕಡೂರಿನಲ್ಲಿ ನಡೆದಿದೆ. ಆಲ್ದೂರು ಮೂಲದ ಮೆಸ್ಕಾಂ ನೌಕರ ಪ್ರದೀಪ್ ಎಂಬುವರು ಕಡೂರು ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಅವರ ಮೊಬೈಲ್ ಕಳ್ಳತನವಾಗಿತ್ತು. ಕೂಡಲೇ ಆಲ್ದೂರಿಗೆ ಆಗಮಿಸಿದ ಅವರು ಪೊಲೀಸರ ಮಾರ್ಗದರ್ಶನದಂತೆ ಲಾಸ್ಟ್ ರಿಪೋರ್ಟ್ ಎಂಬ ಪೋರ್ಟಲ್ನಲ್ಲಿ ಮೊಬೈಲ್ನ ಎಲ್ಲಾ ದಾಖಲೆಯ ವರದಿಯನ್ನು ಸಲ್ಲಿಕೆ ಮಾಡಿ ಮೊಬೈಲ್ ಬ್ಲಾಕ್ ಮಾಡಿಸಿದ್ದರು.
ಬಳಿಕ ಕಳೆದುಹೋದ ಸಿಮ್ ಕಾರ್ಡ್ ಬದಲಾಗಿ ಹೊಸ ಸಿಮ್ ಕಾರ್ಡ್ ಖರೀದಿಸಿ ಅಂದೇ ಸಿಮ್ ಆಕ್ಟಿವೇಶನ್ ಮಾಡಿಸಿಕೊಂಡಿದ್ದರು. ಬಳಿಕ ಹೊಸತಾಗಿ ಮತ್ತೊಂದು ಮೊಬೈಲನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಲು ಹೋದಾಗ ತಮ ಖಾತೆಯಲ್ಲಿ ಹಣ ಇಲ್ಲದಿರುವುದು ಅರಿವಿಗೆ ಬಂದಿದೆ.
ಕೂಡಲೇ ಬ್ಯಾಂಕ್ನಲ್ಲಿ ತಮ ಖಾತೆ ಬಗ್ಗೆ ವಿಚಾರ ಮಾಡಿದಾಗ 1,03,923 ರೂ. ಇದ್ದ ಬ್ಯಾಲೆನ್ಸ್ ಮೊಬೈಲ್ ಕಳೆದು ಹೋದ ಬಳಿಕ 9,873 ರೂ. ಆಗಿರುವುದು ತಿಳಿದು ಬಂದಿದೆ. ಕೂಡಲೇ ಬ್ಯಾಂಕ್ನ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿಸಿ ಆಲ್ದೂರು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತಮ ಖಾತೆಯಿಂದ ಅಕ್ರಮವಾಗಿ 94,050 ರೂ. ವರ್ಗಾವಣೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಹಣ ಕೊಡಿಸುವಂತೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
