ಬೆಂಗಳೂರು,ಜೂ.22-ಭೀಮಾ ತೀರದಲ್ಲಿ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ, ಸುಪಾರಿ ಕಿಲ್ಲರ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.
ಆರೋಪಿ ಮಹೇಶ್ ಚಂದ್ರಕಾಂತ್ ತಳವಾರ್ (29) ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಇಟ್ಟಿಂಗಿಹಾಳ ಗ್ರಾಮದ ಸುಮಾರು 1 ಕಿಮೀ ದೂರದಲ್ಲಿ ಇಂದು ಮುಂಜಾನೆ 5.30 ರ ಸುಮಾರಿನಲ್ಲಿ ಆರೋಪಿ ಮಹೇಶ್ ಬಚ್ಚಿಟ್ಟುಕೊಂಡಿರುವ ಬಗ್ಗೆ ಚಡಚಣ ವೃತ್ತ ಸರ್ಕಲ್ ಇನ್್ಸಪೆಕ್ಟರ್ ಪರಶುರಾಮ್ ಮನಗೂಳಿ ಅವರಿಗೆ ಮಾಹಿತಿ ಲಭಿಸಿದೆ.
ಈ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲು ಇನ್್ಸಪೆಕ್ಟರ್ ಮತ್ತು ಅವರ ಸಿಬ್ಬಂದಿಗಳಾದ ಶೇಖರ್ ಪವಾರ್, ವಿಜಯಕುಮಾರ್ ಬನಸೋಡೆ ಹಾಗೂ ಇನ್ನಿತರರೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರನ್ನು ನೋಡಿದ ಆರೋಪಿ ಮಹೇಶ್ ಚಂದ್ರಕಾಂತ್ ಏಕಾಏಕಿ ಸಿಬ್ಬಂದಿಗಳ ಮೇಲೆ ಕಲ್ಲಿನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಸಿಪಿಐ ಪರಶುರಾಮ್ ಅವರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ.
ಪೊಲೀಸರ ಮಾತಿಗೆ ಕಿವಿಗೊಡದೇ ಮತ್ತೆ ಕಲ್ಲಿನಿಂದ ದಾಳಿ ನಡೆಸಿದಾಗ ಆತರಕ್ಷಣೆಗಾಗಿ ಸಿಪಿಐ ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಆರೋಪಿಯು ಭೀಮಾತೀರದ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಜನರನ್ನು ಕೊಲೆ ಮಾಡಲು 15 ಲಕ್ಷ ಸುಪಾರಿ ಪಡೆದಿದ್ದ ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಘಟನೆ ಹಿನ್ನಲೆ:
ಜಮೀನು ವಿಚಾರಕ್ಕೆ ಆರೋಪಿ ಮಹೇಶ್ ತಳವಾರ್, ಭೀಮಾತೀರದ ಗೋವಿಂದಪುರ ಗ್ರಾಮದ ಚಡಚಣದ ನಿರಾಳೆ ಕುಟುಂಬವೊಂದರ ಮೇಲೆ ದ್ವೇಷ ಸಾಧಿಸುತ್ತಿದ್ದನು.ಕಳೆದ ಮೇ 29 ರಂದು ಗೋವಿಂದಪುರ ಗ್ರಾಮದ ಜಮೀನಿನಲ್ಲಿ ನಿರಾಳೆ ಕುಟುಂಬದ ಐದು ಮಂದಿ ಹಾಗೂ ಸ್ಥಳೀಯ ನಿವಾಸಿ ಸೇರಿದಂತೆ 15 ಮಂದಿ ಕೆಲಸ ಮಾಡುತ್ತಿದ್ದರು.
ಒಂದೇ ಜಾಗದಲ್ಲಿ ಕುಟುಂಬದ ಐದು ಮಂದಿ ಇರುವುದನ್ನು ಗಮನಿಸಿದ ಆರೋಪಿ ಮಹೇಶ್ ಮತ್ತು ಅವನ ಸಹಚರರು ಇದೇ ಸರಿಯಾದ ಸಮಯವೆಂದು ತಿಳಿದು ತನ್ನ ಸಹಚರರೊಂದಿಗೆ ಸೇರಿಕೊಂಡು ಏಕಾಏಕಿ ಲಾಂಗ್, ಮಚ್ಚುಗಳಿಂದ ದಾಳಿ ಮಾಡಿದ್ದು, ಅಲ್ಲದೇ ಬಂದೂಕುಗಳಿಂದ ಗುಂಡು ಹಾರಿಸಿ ಆರು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ದಾಳಿ ನಡೆಯುತ್ತಿದ್ದಂತೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಎದ್ದೆವೋ, ಬಿದ್ದಿವೋ ಎಂಬಂತೆ ಸ್ಥಳದಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಈ ಪ್ರಕರಣ ಭೀಮಾ ತೀರವನ್ನಷ್ಟೇ ಅಲ್ಲದೇ ರಾಜ್ಯದ ಗಮನ ಸೆಳೆದಿತ್ತು. ಅಂದಿನಿಂದ ತಲೆ ಮರೆಸಿಕೊಂಡು ಅಡ್ಡಾಡುತ್ತಿದ್ದ ಪ್ರಮುಖ ಆರೋಪಿಯನ್ನು ಕೊನೆಗೂ ಪೊಲೀಸರು ತಮ ಖೆಡ್ಡಾಗೆ ಬೀಳಿಸಿಕೊಂಡಿದ್ದಾರೆ.ಈ ಪ್ರಕರಣದಲ್ಲಿ ಇದುವರೆಗೂ 38 ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.
