ಬೆಂಗಳೂರು,ಜೂ.29- ಒಂಟಿಯಾಗಿ ವಾಸವಾಗಿದ್ದ ಪಶ್ಚಿಮ ಬಂಗಾಳದ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಬೊಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಂಗಸಂದ್ರದ ಮುನಿಯಪ್ಪ ಲೇಔಟ್ ನಿವಾಸಿ ಕೃಷ್ಣ ಬರ್ಮನ್ (40) ಕೊಲೆಯಾದ
ಮಹಿಳೆ.
ಪಶ್ಚಿಮ ಬಂಗಾಳ ಮೂಲದವರಾದ ಕೃಷ್ಣ ಬರ್ಮನ್ ಸಣ್ಣ ರೂಮ್ ಮಾಡಿಕೊಂಡು ವಾಸವಾಗಿದ್ದು, ಅಪಾರ್ಟ್ಮೆಂಟ್ನ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದುದ್ದಲ್ಲದೇ, ಗಾರ್ಮೆಂಟ್್ಸಗೂ ಹೋಗುತ್ತಿದ್ದರು.ನಿನ್ನೆ ಸಂಜೆ ಇವರು ವಾಸವಾಗಿದ್ದ ಮನೆಯ ಬಾಗಿಲು ಅರ್ಧಕ್ಕೆ ತೆಗೆದುಕೊಂಡಿರುವುದನ್ನು ಅಕ್ಕಪಕ್ಕದ ನಿವಾಸಿಗಳು ಗಮನಿಸಿ ಮಹಿಳೆಯನ್ನು ಕೂಗಿದ್ದಾರೆ.
ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡು ಬಾಗಿಲು ತಳ್ಳಿ ನೋಡಿದಾಗ ಮಹಿಳೆ ಬಿದ್ದಿರುವುದು ಕಂಡು ಮನೆ ಮಾಲೀಕರಿಗೆ ತಿಳಿಸಿದ್ದಾರೆ.ಮನೆ ಮಾಲೀಕರು ಬಂದು ನೋಡಿ ತಕ್ಷಣ 112 ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಯಾರೋ ಬಂದು ಮಹಿಳೆಯ ತಲೆಗೆ ಹೊಡೆದು ಕೊಲೆ ಮಾಡಿರುವುದು ಗೊತ್ತಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಶ್ಚಿಮ ಬಂಗಾಳದಲ್ಲಿರುವ ಮಹಿಳೆ ಕುಟುಂಬಕ್ಕೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಮನೆಯನ್ನೆಲ್ಲಾ ಪರಿಶೀಲಿಸಿದರೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಈ ಮನೆಗೆ ಯಾರು ಬಂದಿದ್ದರು, ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.ಮಹಿಳೆಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಒಂಟಿ ಮಹಿಳೆಯ ಕೊಲೆಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
