ತುಮಕೂರು,ಜು.2- ಶಿಕ್ಷಕಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಸುಮಾರು 4 ಲಕ್ಷ ಮೌಲ್ಯದ 80 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಕಳ್ಳರು ಪರಾರಿಯಾಗಿರುವ ಘಟನೆ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ.
ಅಪರಿಚಿತ ಮಹಿಳೆಯೊಬ್ಬರು ಊಟ ಕೇಳುವ ನೆಪದಲ್ಲಿ ಶಿಕ್ಷಕಿಯ ಮನೆಗೆ ಬಂದಿದ್ದರು. ಮನೆಯಲ್ಲಿ ಬೇರೆ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಅವರೊಂದಿಗೆ ಬಂದಿದ್ದ ಕಳ್ಳರು ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿ, ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಅವರ ಕೊರಳಿನಲ್ಲಿದ್ದ 80 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಖಾರದ ಪುಡಿ ಕಣ್ಣಿಗೆ ಬಿದ್ದ ಪರಿಣಾಮ ಕೆಲಕಾಲ ಶಿಕ್ಷಕಿಗೆ ಏನೂ ಕಾಣದ ಸ್ಥಿತಿ ಉಂಟಾಗಿತ್ತು. ನಂತರ ಸ್ವಲ್ಪ ಚೇತರಿಸಿಕೊಂಡ ಅವರು ಘಟನೆ ಕುರಿತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
