ಢಾಕಾ, ಜು.7- ಬಾಂಗ್ಲಾದಲ್ಲಿ ಎನ್ಸಿಪಿ ಪಕ್ಷ ಆಯೋಜಿಸಿದ್ದ ಬೃಹತ್ ರ್ಯಾಲಿ ವೇಳೆ ಪ್ರಬಲ ಸ್ಫೋಟ ಸಂಭವಿಸಿದ್ದು, ಕನಿಷ್ಠ ಮೂವರು ಗಾಯಗೊಂಡಿರುವ ಘಟನೆ ಢಾಕಾದ ಸಾವರ್ ಪ್ರದೇಶದಲ್ಲಿ ನಡೆದಿದೆ.
ಎನ್ಸಿಪಿ ನಾಯಕರೊಬ್ಬರು ರ್ಯಾಲಿಯನ್ನುದ್ದೇಶಿಸಿ ವೇದಿಯಲ್ಲಿ ಮಾತನಾಡುತ್ತಿದ್ದಾಗಲೇ ಘಟನೆ ನಡೆದಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಸ್ಫೋಟ ಸಂಭವಿಸುತ್ತಿದ್ದಂತೆ ನೆರೆದಿದ್ದ ಜನರೆಲ್ಲಾ ಧಿಕ್ಕಾಪಾಲಾಗಿ ಓಡಿದ್ದಾರೆ. ಈ ಸ್ಫೋಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನಡೆದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯ 2ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹಮಿಕೊಂಡಿದ್ದ ಬೃಹತ್ ರ್ಯಾಲಿ ಸಂದರ್ಭದಲ್ಲೇ ಸ್ಫೋಟ ಸಂಭವಿಸಿದೆ.
ವಿದ್ಯಾರ್ಥಿಗಳ ಹೋರಾಟದ ಹಾದಿಯನ್ನು ನೆನಪಿಸುವ ಸಲುವಾಗಿ ಎನ್ಸಿಪಿ ರ್ಯಾಲಿಯನ್ನ ಹಮ್ಮಿಕೊಂಡಿತ್ತು. ಇದೇ ಕಾರ್ಯಕ್ರಮದಲ್ಲಿ ಉಂಟಾದ ಪ್ರಬಲ ಸ್ಫೋಟ ಮತ್ತೆ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.ಸದ್ಯ ಅಧಿಕಾರಿಗಳು ಸ್ಫೋಟಕ್ಕೆ ನಿಖರ ಕಾರಣ ಬಹಿರಂಗಪಡಿಸಿಲ್ಲ, ಈವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ. ಸ್ಫೋಟದ ಕುರಿತು ತನಿಖೆ ತೀವ್ರಗೊಳಿಸಲಾಗಿದೆ.
ಭಯೋತ್ಪಾದಕ ಸ್ಫೋಟ ಆಗಿದೆಯೇ ಅನ್ನೋ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಸ್ಫೋಟದ ವೇಳೆ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಈ ಘಟನೆಯು ದೇಶದಲ್ಲಿ ಮತ್ತೆ ಭದ್ರತಾ ವ್ಯವಸ್ಥೆಗಳ ಬಗ್ಗೆ ಕಳವಳ ಹುಟ್ಟುಹಾಕಿದೆ. ಆದಾಗ್ಯೂ ಅಧಿಕಾರಿಗಳು ಈ ಸ್ಫೋಟವು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಅನ್ನೋದನ್ನು ಬಹಿರಂಗಪಡಿಸಿಲ್ಲ.
