ಬೆಂಗಳೂರು,ಜು.8- ಅಕ್ಕಿ ಮೂಟೆಗಳನ್ನು ಲೋಡ್ ಮಾಡಿಕೊಂಡು ಹೋಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿಂದು ಬೆಳಗಿನ ಜಾವ ನಡೆದಿದೆ.
ಅಸ್ಸಾಂ ಮೂಲದ ಪ್ರೀತಂ (16) ಮತ್ತು ಛತ್ತೀಸ್ಘಡದ ಅಮಿತ್ (19) ಮೃತಪಟ್ಟ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗಿದೆ.ಇಂದು ಬೆಳಗಿನ ಜಾವ 3.15 ರ ಸುಮಾರಿನಲ್ಲಿ ಅಕ್ಕಿ ಮೂಟೆಗಳನ್ನು ತುಂಬಿಕೊಂಡು ತಮಿಳುನಾಡಿನ ಹೊಸೂರಿಗೆ ಕ್ಯಾಂಟರ್ ವಾಹನ ತುಮಕೂರು ರಸ್ತೆ ಮಾರ್ಗವಾಗಿ ಹೋಗುತ್ತಿತ್ತು.
ಇದೇ ಮಾರ್ಗದಲ್ಲಿ ಕ್ಯಾಂಟರ್ ಲಾರಿ ಪುಣೆಯಿಂದ ಅಣಬೆ ಲೋಡ್ ಮಾಡಿಕೊಂಡು ತುಮಕೂರು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿತ್ತು.ಈ ವಾಹನ ದಾಬಾಸ್ಪೇಟೆ ಬಳಿ ಬೆಳಗ್ಗೆ 6.30 ರ ಸುಮಾರಿಗೆ ಬಂದಾಗ ಈ ಕಾರ್ಮಿಕರು ಡ್ರಾಪ್ ಪಡೆದುಕೊಳ್ಳಲು ಈ ವಾಹನ ಹತ್ತಿಕೊಂಡು ಚಾಲಕನ ಕ್ಯಾಬಿನ್ನಲ್ಲಿ ಕುಳಿತಿದ್ದಾರೆ.
ಈ ವಾಹನ ಅತೀ ವೇಗವಾಗಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಅಕ್ಕಿ ಮೂಟೆ ತುಂಬಿದ್ದ ಕ್ಯಾಂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಐದು ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.ಚಾಲಕ ರಾಘವೇಂದ್ರ ಹಾಗೂ ನೀಲಮೋನಿ, ಗೋವಿಂದ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದು ಚಿಕ್ಕಬಾಣವಾರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
