ಬೆಂಗಳೂರು, ಜು.8- ಸಂಪುಟ ವಿಸ್ತರಣೆಯಾದರೆ ಸ್ವಲ್ಪ ಮಟ್ಟಿಗೆ ಸರ್ಕಾರ ಅಲುಗಾಡಬಹುದು. ಆದರೆ ಏನೂ ಆಗುವುದಿಲ್ಲ. ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಸಂಪುಟ ವಿಸ್ತರಣೆಯ ವೇಳೆ ಸರ್ಕಾರ ಬುಡ ಅಲ್ಲಾಡುತ್ತದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಸ್ವಲ್ಪಮಟ್ಟಿಗೆ ಅಲುಗಾಡಬಹುದು. ಆದರೆ ಏನೂ ಆಗುವುದಿಲ್ಲ. ಎರಡು ಮೂರು ದಿನಗಳ ಕಾಲ ಆ ರೀತಿಯಾಗಬಹುದು, ಆಮೇಲೆ ಎಲ್ಲವೂ ಸರಿಹೋಗುತ್ತದೆ ಎಂದರು.
ಕಾಂಗ್ರೆಸ್ಸಿನಲ್ಲೂ ಮೂರು ಸಿಎಂಗಳಾಗುತ್ತಾರೆ ಎಂಬುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಅವರೇ ಮುಂದುವರೆಯುತ್ತಾರೆ. ನಮ ಸರ್ಕಾರ ಗಟ್ಟಿಯಾಗಿದೆ ಎಂದರು.ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುವ ಮುನ್ನವೇ ಚರ್ಚೆ ಮಾಡುವ ಅಗತ್ಯ ಇಲ್ಲ. ಅಲ್ಲಿ ನಾವು ಯಾರನ್ನೂ ಗುರಿ ಮಾಡುತ್ತಿಲ್ಲ. ಕೆಲ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ತಾವು ಭೇಟಿ ಮಾಡಿದ್ದು ನಿಜ. ಚುನಾವಣೆ ಬಂದಾಗ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
