ಬೆಂಗಳೂರು,ಆ.7- ಬಾಂಗ್ಲಾದೇಶಿಗರು ನಿಮ್ಮ ಮನೆಗಳಿಗೆ ನುಗ್ಗಿ ನಿಮಗೆ ಬುದ್ದಿ ಕಲಿಸುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಪೊಲೀಸರಿಗೆ ಸವಾಲು ಹಾಕಿರುವ ಕಿಡಿಗೇಡಿಯೊಬ್ಬ ಆತಂಕ ಮೂಡಿಸಿದ್ದಾನೆ. ಪೊಲೀಸರು ಹಾಗೂ ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡಿ ಮಾತನಾಡಿರುವ ಆತ, ಈಗಾಗಲೇ ಸುಮಾರು 25 ಮಂದಿ ಬಾಂಗ್ಲಾದೇಶಿಗರನ್ನು ಕಳುಹಿಸಿದ್ದೇನೆ. ಅವರುಗಳ ಬಳಿ ಯಾವುದೇ ಐಡಿ ಕಾರ್ಡ್ ಅಥವಾ ಯಾವುದೇ ದಾಖಲೆಗಳಿಲ್ಲ. ನಿಮಗೆ ಧಮ್ ಇದ್ದರೆ ಅವರನ್ನು ಹಿಡಿಯಿರಿ ಎಂದು ಕರ್ನಾಟಕ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ.
ಮನೆಗಳಿಗೆ ನುಗ್ಗಿ ಮಾಡಬೇಕಾದ್ದನ್ನು ಮಾಡುತ್ತಾರೆ. ನೀವು ಗಂಡಸರೇ ಆಗಿದ್ದರೆ ಅವರನ್ನು ಹುಡುಕಿ ನಂತರ ನಾನೇ ನಿಮಗೆ ನನ್ನ ವಿಳಾಸ ಕೊಡುತ್ತೇನೆ. ಆಗ ನೀವು ಬೇಕಾದ್ದು ಮಾಡಿಕೊಳ್ಳಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಡಿಗೇಡಿ ಮಾತನಾಡಿರುವ ಶೈಲಿ ಮತ್ತು ಪೊಲೀಸರಿಗೇ ಸವಾಲು ಹಾಕಿ ರಾಜಕಾರಣಿಗಳನ್ನೂ ಟಾರ್ಗೆಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆತಂಕ ಮೂಡಿಸಿದೆ.
ಸಿಸಿಬಿಯಲ್ಲಿ ಪ್ರಕರಣ ದಾಖಲು : ಈ ಬಗ್ಗೆ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಆತ ಮಂಡ್ಯ ಜಿಲ್ಲೆಯ ಕಿಕ್ಕೇರಿ ನಿವಾಸಿ ಎಂಬುದನ್ನು ಪತ್ತೆಹಚ್ಚಿದ್ದೇವೆ. ವಿದೇಶದಲ್ಲಿರುವ ಆರೋಪಿಯನ್ನು ಬಂಧಿಸಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಆತ ಮತ್ತೊಂದು ವಿಡಿಯೋ ಕಳುಹಿಸಿ ಕ್ಷಮೆ ಯಾಚಿಸಿದ್ದಾನೆ. ಆದರೂ ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಆಯುಕ್ತರು ತಿಳಿಸಿದ್ದಾರೆ. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕದಡುವ ಹಾಗೂ ಆತಂಕ ಸೃಷ್ಟಿಸುವ ಇಂಥ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
Bengaluru police Threat man
