ನವದೆಹಲಿ, ಆ.22- ಎಲ್ಲಾ ಕ್ಷೇತ್ರಗಳಲ್ಲಿನ ಸುಧಾರಣೆಗಳು ತಮ್ಮ ಸರ್ಕಾರದ ಬದ್ಧತೆಯಾಗಿದ್ದು, ದೇಶದ ನಿರಂತರ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಭಾರತ ಹಲವು ಕ್ರಮಗಳನ್ನು ಮುಂದುವರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಂ ಉದ್ದೇಶಿಸಿ ಮಾತನಾಡಿದ ಅವರು, ಭಾರತ ತನ್ನ ನೀತಿಗಳಲ್ಲಿ ರಾಜಕೀಯ ಸ್ಥಿರತೆ ಮತ್ತು ನಿರಂತರತೆಯನ್ನು ಹೊಂದಿದೆ. ಹೀಗಾಗಿ ಜಗತ್ತು ಭಾರತವನ್ನು ಬೆಳವಣಿಗೆ ಮತ್ತು ಭರವಸೆಯ ಉಜ್ವಲ ತಾಣವಾಗಿ ನೋಡುತ್ತಿದೆ ಎಂದರು.
ನಿರಂತರ ಬೆಳವಣಿಗೆಯ ವೇಗವನ್ನು ಖಚಿತಪಡಿಸಿಕೊಳ್ಳಲು ಭಾರತ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳೊಂದಿಗೆ ದೇಶ ಮುನ್ನಡೆಯುತ್ತಿದ್ದು, ಸುಧಾರಣೆಗಳು ನಮ್ಮ ಬದ್ಧತೆಯಾಗಿವೆ ಎಂದು ಹೇಳಿದರು.
ಸಂಪನ್ಮೂಲಗಳ ಶಸ್ತ್ರೀಕರಣದಿಂದಾಗಿ ಜಗತ್ತು ಬೆಳವಣಿಗೆಗೆ ಸಂಬಂಧಿಸಿದ ಹಲವು ಕಳವಳಗಳನ್ನು ಎದುರಿಸುತ್ತಿದೆ. ಆದರೆ ಭಾರತವನ್ನು ಮಾತ್ರ ಬೆಳವಣಿಗೆಯ ಉಜ್ವಲ ತಾಣವಾಗಿ ನೋಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.ಆಡಳಿತದ ಮೇಲೆ ಬಲವಾದ ಗಮನ ಕೇಂದ್ರೀಕರಿಸಿರುವ ಸುಧಾರಣೆಗಳಿಗೆ ಎನ್ಡಿಎ ಸರ್ಕಾರ ಸ್ಪಷ್ಟ ಮಾರ್ಗಸೂಚಿಯನ್ನು ಹೊಂದಿದೆ. ಹೆಚ್ಚಿನ ಉತ್ಪಾದನೆಗೆ ಉತ್ತೇಜನ ನೀಡುವ ಮೂಲಕ ಸರ್ಕಾರ ಪ್ರತಿಫಲ ನೀಡುತ್ತಿದೆ ಎಂದರು.
ಜನರನ್ನು ಕೊರತೆಯಲ್ಲಿಡುವುದು ಹಿಂದಿನ ಸರ್ಕಾರಗಳ ನೀತಿಯಾಗಿತ್ತು. ಇದರಿಂದ ಜನರು ತಮ್ಮ ಮೂಲಭೂತ ಅಗತ್ಯಗಳಿಗಾಗಿ ಸರ್ಕಾರದ ಮುಂದೆ ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಮೋದಿ ಆರೋಪಿಸಿದರು. ಹಿಂದಿನ ಸರ್ಕಾರಗಳ ‘ಲೈಸೆನ್ಸ್ ರಾಜ್’ ನಿರುದ್ಯೋಗದ ಹೊರೆಯನ್ನು ಹೆಚ್ಚಿಸಿತ್ತು. ಆದರೆ ತಮ್ಮ ಸರ್ಕಾರದ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಮಾದರಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
“ನಾವು ಕೇವಲ ನಿಯಮಗಳನ್ನು ಬದಲಾಯಿಸುತ್ತಿಲ್ಲ. ಸಂಪೂರ್ಣ ನಿಯಂತ್ರಣ ವ್ಯವಸ್ಥೆಯನ್ನೇ ಬದಲಾಯಿಸುತ್ತಿದ್ದೇವೆ. ಕಾನೂನಿನ ಅಡಿಯಲ್ಲಿ ಸ್ಪಷ್ಟವಾಗಿ ನಿಷೇಧಿಸದ ಕೆಲಸವನ್ನು ಮಾಡಲು ಅನಗತ್ಯ ನಿಯಂತ್ರಣ ಇರಬಾರದು ಎಂಬುದು ನಮ್ಮ ಸರ್ಕಾರದ ನಂಬಿಕೆ” ಎಂದು ಪ್ರಧಾನಿ ಹೇಳಿದರು.
ತಮ್ಮ ಸರ್ಕಾರ ನೀತಿ ಮಟ್ಟದಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಜಾರಿಗೊಳಿಸುತ್ತಿದ್ದು, ಆಡಳಿತದ ಮಟ್ಟದಲ್ಲಿಯೂ ಹಾಗೂ ಜೀವನ ಸುಲಭಗೊಳಿಸುವ ನಿಟ್ಟಿನಲ್ಲಿಯೂ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಎಂದರು. ‘ನಿಷೇಧಿಸದ ಹೊರತು ಅನುಮತಿ’ ಎಂಬ ಮಾದರಿಯಿಂದ ‘ನಿಷೇಧಿಸಿದ ಹೊರತು ಅನುಮತಿ’ ಎಂಬ ಮಾದರಿಯತ್ತ ಸಾಗುತ್ತಿದ್ದೇವೆ ಎಂದು ಹೇಳಿದರು.
ಭಾರತೀಯ ರೈಲ್ವೆ, ದೆಹಲಿ ಮೆಟ್ರೋ ಮತ್ತು ನಮೋ ರ್ಯಾಪಿಡ್ ರೈಲಿನಂತಹ ಕ್ಷೇತ್ರಗಳಲ್ಲಿನ ಸಣ್ಣ ಸುಧಾರಣೆಗಳೂ ದೇಶವು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ ಎಂಬುದನ್ನು ತೋರಿಸುತ್ತವೆ ಎಂದು ಪ್ರಧಾನಿ ಹೇಳಿದರು.
ವಿದೇಶಿ ಉಪಗ್ರಹಗಳು ಭಾರತದ ನಕ್ಷೆಯನ್ನು ರಚಿಸಬಹುದಾದರೂ, ಅನುಮತಿಯಿಲ್ಲದೆ ಯಾರೂ ಭಾರತದ ನಕ್ಷೆಯನ್ನು ತಯಾರಿಸಲು ಸಾಧ್ಯವಿಲ್ಲ ಎಂಬಂತಹ ನಿಯಮಗಳು ಈ ಹಿಂದೆ ಇದ್ದವು. ಆದರೆ ತಮ್ಮ ಸರ್ಕಾರ ಈ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ ಎಂದು ಅವರು ಹೇಳಿದರು.
ಗಡಿ ಮೂಲಸೌಕರ್ಯವು ಭಾರತದ ಶಕ್ತಿಯಾಗಿರಬೇಕೇ ಹೊರತು ದೌರ್ಬಲ್ಯವಾಗಬಾರದು ಎಂದು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಭಾರತದ ಗಡಿ ಮೂಲಸೌಕರ್ಯದ ಚಿತ್ರಣವನ್ನೇ ಬದಲಾಯಿಸಿದ್ದೇವೆ ಎಂದರು. ವಿಶ್ವದಲ್ಲೇ ಅತ್ಯಂತ ಅಗ್ಗದ ಡೇಟಾ ಭಾರತದಲ್ಲಿ ಲಭ್ಯವಿದೆ. ದೇಶವು ಅಗ್ಗದ ಮತ್ತು ಗುಣಮಟ್ಟದ ಮೊಬೈಲ್ ಫೋನ್ಗಳನ್ನು ತಯಾರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
