ಬೆಂಗಳೂರು, ಆ.23- ಜನರ ಮಧ್ಯೆಯೇ ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಡಿವಾಳ ಮುಖ್ಯರಸ್ತೆಯಲ್ಲಿ ನಡೆದಿದೆ.ಟ್ರಾಫಿಕ್ ಜಾಮ್ನಿಂದಾಗಿ ಬೈಕ್ನಲ್ಲಿ ತೆರಳುತ್ತಿದ್ದ ಮೆಡಿಕಲ್ ಸ್ಟೋರ್ನ ಮಾಲೀಕ ಸೊಹೇಲ್ ಮೇಲೆ ಎರಗಿದ ದುಷ್ಕರ್ಮಿಗಳ ಗುಂಪು ತಲವಾರ್ ಮತ್ತು ಮಾರಕಾಸ್ತ್ರಗಳಿಂದ ಮನಬಂದಂತೆ ಹೊಡೆದಿದ್ದಾರೆ.
ನೂರಾರು ಸಾರ್ವಜನಿಕರ ಮಧ್ಯೆಯೇ ರಾಜಾರೋಷವಾಗಿ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಸೊಹೇಲ್ನನ್ನು ಕೊಲೆ ಮಾಡಿರುವುದರಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೆಲವರು ಇದು ಬೆಂಗಳೂರಾ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಮನ ಪಾಳ್ಯದ ನಿವಾಸಿಯಾದ ಸೊಹೇಲ್ ಮೆಡಿಕಲ್ ಶಾಪ್ ಹೊಂದಿದ್ದು, ಕಳೆದ ರಾತ್ರಿ 9.30ಕ್ಕೆ ಅಂಗಡಿ ಬಂದ್ ಮಾಡಿ ಮಡಿವಾಳದಿಂದ ಕೋರಮಂಗಲದ ಕಡೆಗೆ ತಮ ಬೈಕ್ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಟ್ರಾಫಿಕ್ ಜಾಮ್ನಿಂದಾಗಿ ಬೈಕ್ನ್ನು ನಿಲ್ಲಿಸಿದಾಗ ಸುಮಾರು ಎರಡು ಬೈಕ್ನಲ್ಲಿ ಅವರನ್ನು ಹಿಂಬಾಲಿಸಿದ ಸುಮಾರು 4 ದುಷ್ಕರ್ಮಿಗಳ ತಂಡ ಏಕಾಏಕಿ ಸಾರ್ವಜನಿಕರ ಮುಂದೆಯೇ ದಾಳಿ ಮಾಡಿದ್ದಾರೆ.
ಸೊಹೇಲ್ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ. ಸಾಮಾನ್ಯ ಜೀವನ ನಡೆಸುತ್ತಿದ್ದು, ಆತನ ಸಹೋದರನ ಮೇಲಿನ ಹಗೆತನದಿಂದ ಶಬೀರ್ ಸಹಚರರು ಈ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ.
