Homeಸಂಪಾದಕೀಯ-ಲೇಖನಗಳುಗಣಪತಿಗೆ ಪ್ರಿಯವಾದ ನೈವೇದ್ಯಗಳು ಯಾವುವು?

ಗಣಪತಿಗೆ ಪ್ರಿಯವಾದ ನೈವೇದ್ಯಗಳು ಯಾವುವು?

ಮೋದಕ ಪ್ರಿಯಾಯ ದೇವಾಯ ವಿಘ್ನರಾಜಾಯ ತೇ ನಮಃ ।
ಪಂಚಖಾದ್ಯಪ್ರಿಯಾಯೈವ ವಿದ್ಯಾದಾತ್ರೇ ನಮೋ ನಮಃ ॥

ಮೋದಕ ಹಾಗೂ ಪಂಚಖಾದ್ಯಗಳನ್ನು ಇಷ್ಟಪಟ್ಟು ಸ್ವೀಕರಿಸುವ, ವಿದ್ಯೆಯನ್ನು ಕರುಣಿಸುವ ಹಾಗೂ ವಿಘ್ನಗಳನ್ನು ನಿವಾರಿಸುವ ಶ್ರೀ ಗಣೇಶನಿಗೆ ಪ್ರಣಾಮಗಳು.

ಗಣೇಶ ಚತುರ್ಥಿಯಂದು ವಿಘ್ನವಿನಾಶಕ ಗಣಪತಿಗೆ ವಿವಿಧ ಬಗೆಯ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವು ಇಂತಿವೆ:

ಮೋದಕ:
ಗಣಪತಿಗೆ ಅತ್ಯಂತ ಪ್ರಿಯವಾದ ನೈವೇದ್ಯಗಳಲ್ಲಿ ಮೋದಕ ಪ್ರಮುಖವಾದುದು. ಅಕ್ಕಿಹಿಟ್ಟಿನ ಹೊದಿಕೆಯಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಹೂರಣ ತುಂಬಿ ಬೇಯಿಸುವ ಮೋದಕವು ಜ್ಞಾನ ಮತ್ತು ಆನಂದದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಕಡಲೆಹಿಟ್ಟಿನ ಲಾಡು:
ಗಣೇಶನ ಕರಕಮಲದಲ್ಲಿ ಸದಾ ಶೋಭಿಸುವ ಲಾಡು ಸಮೃದ್ಧಿ, ಸೌಭಾಗ್ಯ ಹಾಗೂ ಜೀವನದ ಸಿಹಿಯನ್ನು ಸಂಕೇತಿಸುತ್ತದೆ.

ಪಂಚಖಾದ್ಯ:
ಒಣಕೊಬ್ಬರಿ, ಬೆಲ್ಲ, ಎಳ್ಳು, ಅವಲಕ್ಕಿ ಹಾಗೂ ಹುರಿಗಡಲೆ ಸೇರಿಸಿ ತಯಾರಿಸುವ ಪಂಚಖಾದ್ಯವು ಆರೋಗ್ಯ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ಮಹತ್ವ ಹೊಂದಿದೆ.

ಅವಲಕ್ಕಿ-ಬೆಲ್ಲ:
ಅತ್ಯಂತ ಸಾತ್ವಿಕ ಹಾಗೂ ಸರಳವಾದ ನೈವೇದ್ಯ. ಕಾಯಿ, ಬೆಲ್ಲ ಮತ್ತು ಏಲಕ್ಕಿ ಬೆರೆಸಿದ ಅವಲಕ್ಕಿಯನ್ನು ಗಣಪತಿಗೆ ಅರ್ಪಿಸಲಾಗುತ್ತದೆ.

ಕಬ್ಬು-ಬಾಳೆಹಣ್ಣು:
ಆನೆಯ ಮುಖವನ್ನು ಹೊಂದಿರುವ ಗಣೇಶನಿಗೆ ನೈಸರ್ಗಿಕವಾಗಿ ದೊರೆಯುವ ಸಿಹಿಯಾದ ಕಬ್ಬಿನ ತುಂಡುಗಳು ಹಾಗೂ ಬಾಳೆಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ.

ಕರ್ಜಿಕಾಯಿ:
ಕಾಯಿ, ಬೆಲ್ಲ ಹಾಗೂ ಗಸಗಸೆ ಹೂರಣ ತುಂಬಿ ಕರಿಯುವ ಕರ್ಜಿಕಾಯಿ ಗಣೇಶ ಚತುರ್ಥಿಯ ವಿಶೇಷ ನೈವೇದ್ಯಗಳಲ್ಲಿ ಒಂದಾಗಿದೆ.

ಪಂಚಾಮೃತ:
ಹಾಲು, ಮೊಸರು, ಹಸುವಿನ ತುಪ್ಪ, ಜೇನುತುಪ್ಪ ಹಾಗೂ ಸಕ್ಕರೆಯನ್ನು ಬೆರೆಸಿ ತಯಾರಿಸುವ ಪಂಚಾಮೃತವನ್ನು ಗಣಪತಿಗೆ ಅರ್ಪಿಸಲಾಗುತ್ತದೆ. ಪಂಚಾಮೃತ ತಯಾರಿಕೆಯಲ್ಲಿ ಪ್ರಮಾಣಕ್ಕೂ ಮಹತ್ವವಿದೆ ಎಂದು ಸಂಪ್ರದಾಯದಲ್ಲಿ ಹೇಳಲಾಗುತ್ತದೆ.

ಸಾಮಾನ್ಯವಾಗಿ 16 ಚಮಚ ಹಾಲು, 8 ಚಮಚ ಮೊಸರು, 4 ಚಮಚ ಜೇನುತುಪ್ಪ, 2 ಚಮಚ ತುಪ್ಪ ಹಾಗೂ 1 ಚಮಚ ಸಕ್ಕರೆ ಸೇರಿಸುವ ಪ್ರಮಾಣವನ್ನು ಉಲ್ಲೇಖಿಸಲಾಗುತ್ತದೆ.

ಬಾಹ್ಯ ಅದ್ಧೂರಿಯ ನೈವೇದ್ಯಕ್ಕಿಂತಲೂ ಶಾಸ್ತ್ರೋಕ್ತವಾಗಿ, ಶ್ರದ್ಧೆ ಮತ್ತು ಭಕ್ತಿಯಿಂದ ಅರ್ಪಿಸುವ ಸಣ್ಣ ಮೋದಕವಾಗಲಿ ಅಥವಾ ಒಂದು ಮುಷ್ಟಿ ಅವಲಕ್ಕಿಯಾಗಲಿ ಗಣಪತಿಗೆ ಪ್ರಿಯವಾಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ನೈವೇದ್ಯಕ್ಕಿಂತ ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯೇ ಮುಖ್ಯ.

RELATED ARTICLES
spot_img

Latest News