ಮಂಡ್ಯ, ಆ.29- ಕಾಂಗ್ರೆಸ್ ಹೆಸರು ಹೇಳಿಕೊಂಡು ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳುವ ದಾರಿದ್ರ್ಯ ನಮಗೆ ಬಂದಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಕಾಪಾಡುವ ವಂಶಸ್ಥರ ಹೆಸರನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ‘‘ನನ್ನ ಅಸ್ತಿತ್ವದ ಬಗ್ಗೆ ಪ್ರಶ್ನಿಸುವ ನೀವು ತಮಿಳುನಾಡಿನಲ್ಲಿ ಯಾವ ಸಿದ್ಧಾಂತ ಹೊಂದಿದ್ದೀರಿ? 2018ರಲ್ಲಿ ನಮ್ಮ ಮನೆ ಬಾಗಿಲಿಗೆ ನೀವು ಬಂದಾಗ ಯಾವ ಸಿದ್ಧಾಂತವಿತ್ತು? ಕೆಪಿಎಸ್ಸಿ ನೇಮಕಾತಿ ಹಗರಣದ ಕುರಿತು ದಾಖಲೆ ಸಹಿತ ಮಾಡಿರುವ ಆರೋಪಗಳಿಗೆ ಮೊದಲು ಉತ್ತರ ನೀಡಿ’’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೇಮಕಾತಿಗೆ ಸಂಬಂಧಿಸಿದಂತೆ ತಾವು ಆರೋಪ ಮಾಡಿಲ್ಲ. ನಡೆದಿರುವ ಅಕ್ರಮಗಳನ್ನು ದಾಖಲೆ ಸಹಿತ ಬಹಿರಂಗಪಡಿಸಿದ್ದೇನೆ. ಅಕ್ರಮ ಸಾಬೀತಾಗಿರುವ ದಾಖಲೆಗಳಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕುಳಿತಿದೆ. ದಾಖಲೆಗಳೊಂದಿಗೆ ತಾವು ಮಾಡಿರುವ ಆರೋಪಗಳಿಗೆ ಮೊದಲು ಉತ್ತರಿಸಲಿ ಎಂದು ಆಗ್ರಹಿಸಿದರು.
ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ವರದಿ ನೀಡಿದ್ದರೂ ಸರ್ಕಾರ ಏಕೆ ಮೌನವಾಗಿದೆ? ನ್ಯಾಯಾಲಯದ ಮೊರೆ ಏಕೆ ಹೋಗಿಲ್ಲ? ಹಗರಣವನ್ನು ಮುಚ್ಚಿಹಾಕಲು ಆರೋಪಿಗಳಿಗೆ ನೇಮಕಾತಿ ಆದೇಶ ನೀಡಿ ರಕ್ಷಣೆ ಮಾಡುವುದಲ್ಲದೆ ಸಂಬಳವನ್ನೂ ನೀಡಲಾಗುತ್ತಿದೆ. ಮೊದಲು ಇದಕ್ಕೆ ಉತ್ತರಿಸಿ, ಬಳಿಕ ಸಿದ್ಧಾಂತದ ಬಗ್ಗೆ ಮಾತನಾಡಿ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಮುಜುಗರ ತಪ್ಪಿಸಿಕೊಳ್ಳಲು ರಾಜೀನಾಮೆ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆರೋಪದಿಂದ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರಕ್ಕೆ ಉಂಟಾಗುವ ಮುಜುಗರ ತಪ್ಪಿಸಿಕೊಳ್ಳಲು ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
‘‘ನನ್ನ ಮೇಲಿನ ಆರೋಪವನ್ನು 14 ವರ್ಷಗಳಿಂದ ಜೀವಂತವಾಗಿಟ್ಟಿದ್ದಾರೆ. ಅದು ರಾಜಕೀಯ ಆರೋಪವೇ ಹೊರತು ಹಣ ದುರುಪಯೋಗಪಡಿಸಿಕೊಂಡ ಆರೋಪವಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಮುಚ್ಚಿಹಾಕಬಹುದಿತ್ತು. ಆದರೆ ತನಿಖೆ ನಡೆಸಲಿ ಎಂದೇ ಬಿಟ್ಟಿದ್ದೇನೆ’’ ಎಂದು ಹೇಳಿದರು.
ಅಭಿವೃದ್ಧಿಯ ಹೆಸರಿನಲ್ಲಿ 600 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಸದನ ಸಮಿತಿ ರಚಿಸಲಾಗಿತ್ತು. ಆ ವರದಿ ಎಲ್ಲಿಗೆ ಹೋಯಿತು? ಎಂದು ಸಚಿವ ಎಚ್.ಸಿ. ಬಾಲಕೃಷ್ಣ ಅವರ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ರಾಜೀನಾಮೆ ನೀಡುವುದಾಗಿ ಬಹಳಷ್ಟು ಮಂದಿ ಹೇಳಿದ್ದಾಗಿದೆ ಎಂದರು.
ತಮಿಳುನಾಡಿಗೆ ನೀರು
ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಜಲಾಶಯ ಭರ್ತಿಯಾಗದಿದ್ದರೂ ನೀರು ಹರಿಸಲಾಗುತ್ತಿದೆ. ನೀರು ಬಿಡುತ್ತಿರುವುದನ್ನು ಪ್ರಶ್ನಿಸುವ ಧೈರ್ಯ ಸರ್ಕಾರಕ್ಕೆ ಇಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು. ‘‘ಸರಿಯಾದ ಪೂರ್ವಸಿದ್ಧತೆ ಮಾಡಿಕೊಂಡು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಾಡಬೇಕಿದೆ. ಈ ವಿಚಾರದಲ್ಲಿ ನನಗೂ ಹೇಳಿ ಸಾಕಾಗಿದೆ’’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
