Homeಅಂತಾರಾಷ್ಟ್ರೀಯಸೌದಿ ಮೇಲೆ ಹೌತಿ ದಾಳಿಯನ್ನು ಖಂಡಿಸಿದ ಭಾರತ

ಸೌದಿ ಮೇಲೆ ಹೌತಿ ದಾಳಿಯನ್ನು ಖಂಡಿಸಿದ ಭಾರತ

ನವದೆಹಲಿ, ಸೆ.16- ಸೌದಿ ಅರೇಬಿಯಾದ ನಾಗರಿಕ ಮೂಲಸೌಕರ್ಯ ಮತ್ತು ಆರ್ಥಿಕ ಆಸ್ತಿಗಳ ಮೇಲೆ ಹೌತಿ ಬಂಡುಕೋರರು ನಡೆಸಿದ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.ಇಂತಹ ದಾಳಿಗಳು ಪ್ರಾದೇಶಿಕ ಸ್ಥಿರತೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಬಾಬ್‌-ಎಲ್‌-ಮಂಡೆಬ್‌ ಜಲಸಂಧಿಯ ಮೂಲಕ ನೌಕಾಯಾನದ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುತ್ತವೆ ಎಂದು ಭಾರತ ಎಚ್ಚರಿಸಿದೆ.

ಮಧ್ಯಪ್ರಾಚ್ಯದಲ್ಲಿ, ವಿಶೇಷವಾಗಿ ಸೌದಿ ಅರೇಬಿಯಾದ ಮೇಲಿನ ಹೌತಿ ದಾಳಿಗಳ ನಂತರ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಈ ಹೇಳಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದ ಪರಿಸ್ಥಿತಿಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜೈಸ್ವಾಲ್‌, ಭಾನುವಾರ ನಡೆದ ಬ್ರಿಕ್ಸ್‌ ಶೃಂಗಸಭೆಯ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಸೌದಿ ವಿದೇಶಾಂಗ ಸಚಿವ ಪ್ರಿನ್ಸ್‌ ಫೈಸಲ್‌ ಬಿನ್‌ ಫರ್ಹಾನ್‌ ಅಲ್‌ ಸೌದ್‌ ಅವರೊಂದಿಗೆ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿಸಿದರು.

ಹೌತಿಗಳ ವಿಷಯವನ್ನೂ ಚರ್ಚಿಸಲಾಗಿದೆ. ನಿಮಗೆ ತಿಳಿದಿರುವಂತೆ, ಇತ್ತೀಚೆಗೆ ಸೌದಿ ಅರೇಬಿಯಾದ ಮೇಲೆ ದಾಳಿ ನಡೆದಿದೆ ಮತ್ತು ನಾವು ಅದನ್ನು ಖಂಡಿಸಿದ್ದೇವೆ. ಕೆಂಪು ಸಮುದ್ರ ಪ್ರದೇಶದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುತ್ತಿರುವ ಬಗ್ಗೆಯೂ ನಾವು ತೀವ್ರ ಕಳವಳ ಹೊಂದಿದ್ದೇವೆ ಎಂದು ವಕ್ತಾರರು ಹೇಳಿದರು.

ನಾಗರಿಕ ಮೂಲಸೌಕರ್ಯ ಮತ್ತು ಆರ್ಥಿಕ ಆಸ್ತಿಗಳ ಮೇಲಿನ ದಾಳಿ ಸೇರಿದಂತೆ ಸೌದಿ ಅರೇಬಿಯಾದ ಸಾರ್ವಭೌಮ ಪ್ರದೇಶದ ಮೇಲಿನ ದಾಳಿಯನ್ನು ನಾವು ಖಂಡಿಸಿದ್ದೇವೆ. ಇಂತಹ ದಾಳಿಗಳು ಪ್ರಾದೇಶಿಕ ಸ್ಥಿರತೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಬಾಬ್‌-ಎಲ್‌-ಮಂಡೆಬ್‌ ಮೂಲಕ ನೌಕಾಯಾನದ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುತ್ತವೆ ಎಂದು ನಾನು ಹೇಳಬಯಸುತ್ತೇನೆ ಎಂದು ಅವರು ನುಡಿದರು.

ಇವು ನಮಗೆ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಶೀಘ್ರವಾಗಿ ಮರುಸ್ಥಾಪನೆಯಾಗಲಿ ಎಂದು ನಾವು ಆಶಿಸುತ್ತೇವೆ. ಅದೇ ಸಮಯದಲ್ಲಿ, ಪ್ರಪಂಚದ ಆ ಭಾಗದಿಂದ ನಾವು ಇಂಧನ ಪೂರೈಕೆಯನ್ನು ಪಡೆಯುವುದನ್ನು ಮುಂದುವರಿಸಿದ್ದೇವೆ ಎಂಬುದನ್ನು ನಾನು ಹೇಳಲು ಬಯಸುತ್ತೇನೆ ಎಂದು ಜೈಸ್ವಾಲ್‌ ಸೇರಿಸಿದರು.

ಇರಾನ್‌ ಬೆಂಬಲಿತ ಹೌತಿ ಗುಂಪು ಸೌದಿ ಅರೇಬಿಯಾದ ಪೂರ್ವ-ಪಶ್ಚಿಮ ತೈಲ ಪೈಪ್‌ಲೈನ್‌ ಮೇಲೆ ದಾಳಿ ನಡೆಸಿತ್ತು. ಕಚ್ಚಾ ತೈಲ ಪೂರೈಕೆಗೆ ಈ ಪೈಪ್‌ಲೈನ್‌ ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಹಾರ್ಮುಜ್‌ ಜಲಸಂಧಿಯ ಮೂಲಕ ನಡೆಯುತ್ತಿದ್ದ ನೌಕಾಯಾನಕ್ಕೆ ಇರಾನ್‌ ಸಂಬಂಧಿತ ಸಂಘರ್ಷದಿಂದ ಅಡಚಣೆ ಉಂಟಾದಾಗಿನಿಂದ, ಸೌದಿ ಅರೇಬಿಯಾದ ತೈಲ ರಫ್ತಿಗೆ ಪೂರ್ವ-ಪಶ್ಚಿಮ ಪೈಪ್‌ಲೈನ್‌ ಒಂದು ಪ್ರಮುಖ ಪರ್ಯಾಯ ಮಾರ್ಗವಾಗಿ ಕಾರ್ಯನಿರ್ವಹಿಸುತ್ತಿದೆ.

RELATED ARTICLES
spot_img

Latest News