ಬೆಂಗಳೂರು,ಡಿ.22- ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ವೇ (Bengaluru-Mysuru Expressway) ವಾಹನ ಸಂಚಾರಕ್ಕೆ ಮುಕ್ತವಾದ ಬಳಿಕ, ಕಳೆದ 3 ವರ್ಷಗಳಲ್ಲಿ ಎರಡು ಟೋಲ್ಗಳಿಂದ ಬರೋಬ್ಬರಿ 855.79 ಕೋಟಿ ರೂ.ಗಳಷ್ಟು ಟೋಲ್ ಸಂಗ್ರಹ(Toll Collection)ವಾಗಿದೆ.
ಹೆದ್ದಾರಿಯಲ್ಲಿ ಎರಡು ಟೋಲ್ ಪ್ಲಾಜಾಗಳಿವೆ. 2022-23 ಮತ್ತು 2025-26ರ ನಡುವೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಿಮಿಣಿಕೆ ಟೋಲ್ ಪ್ಲಾಜಾದಲ್ಲಿ 530 ಕೋಟಿ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ಪ್ಲಾಜಾದಲ್ಲಿ 325.23 ಕೋಟಿ ರೂ.ಗಳು ಸಂಗ್ರಹವಾಗಿದೆ.
2023ರಿಂದ 2025ರವರೆಗೆ ಎಕ್ಸ್ ಪ್ರೆಸ್ ವೇಯಲ್ಲಿ ಒಟ್ಟು 1,674 ಅಪಘಾತಗಳಾಗಿದ್ದು, 215 ಜೀವಗಳನ್ನು ಬಲಿ ತೆಗೆದುಕೊಂಡಿದೆ, 311 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ 865 ಅಪಘಾತಗಳು ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ ಪ್ಯಾಕೇಜ್ 1ರಲ್ಲಿ ಸಂಭವಿಸಿವೆ.
76 ಸಾವುಗಳು ಮತ್ತು 185 ಗಂಭೀರ ಗಾಯಗಳಾಗಿವೆ. ನಿಡಘಟ್ಟ-ಮೈಸೂರು ಮಾರ್ಗದಲ್ಲಿ ಪ್ಯಾಕೇಜ್ 2ರಲ್ಲಿ 809 ಅಪಘಾತಗಳು ದಾಖಲಾಗಿದ್ದು, ಇದರಲ್ಲಿ 139 ಜನರು ಪ್ರಾಣ ಕಳೆದುಕೊಂಡು 126 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ ಅಪಘಾತಗಳು ಮತ್ತು ಸಾವುಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದ್ದರೂ, ನಿಡಘಟ್ಟ-ಮೈಸೂರು ಮಾರ್ಗದಲ್ಲಿ ಅಪಘಾತಗಳು ಮತ್ತು ಸಾವುಗಳು ಹೆಚ್ಚಿವೆ. ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ.ಗೆ ಇಳಿಸಲಾಗಿದೆ.
ವೇಗವನ್ನು ಮೇಲ್ವಿಚಾರಣೆ ಮಾಡಲು ಮತ್ತು ದಂಡ ವಿಧಿಸಲು ವಿವಿಧ ಸ್ಥಳಗಳಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಆದರೆ ಅಪಘಾತಗಳಲ್ಲಿ ಇಳಿಕೆ ಕಂಡುಬಂದಿಲ್ಲ. ಬೆಂಗಳೂರು ಮೈಸೂರು ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿದ 118 ಕಿ.ಮೀ ಉದ್ದದ ಹೆದ್ದಾರಿಯನ್ನು 2023ರಲ್ಲಿ ಪ್ರಧಾನಿ ನರೇಂದ್ರಮೋದಿ ಉದ್ಘಾಟಿಸಿದ್ದರು.
Read This : ಚಳಿಯ ಸುಳಿಯಲ್ಲಿ ಕರ್ನಾಟಕ, 15 ಡಿ.ಸೆ.ಗೆ ಕುಸಿದ ಕನಿಷ್ಠ ತಾಪಮಾನ
