ಬೆಂಗಳೂರು, ಜ. 17- ಮಧ್ಯಪ್ರದೇಶದ ಭೂಪಾಲ್ನಲ್ಲಿ ಕಲುಷಿತ ನೀರು ಸೇವನೆಯಿಂದ ಹಲವಾರು ಅಮಾಯಕರು ಪ್ರಾಣ ಕಳೆದುಕೊಂಡ ಘಟನೆ ಇನ್ನು ಹಸಿರಾಗಿರುವಾಗಲೇ ಸಿಲಿಕಾನ್ ಸಿಟಿಯಲ್ಲೂ ಅಂತಹದ್ದೆ ಒಂದು ಪ್ರಕರಣ ವರದಿಯಾಗಿದೆ.ನಗರದ ವಿ ಎಸ್ ಗಾರ್ಡನ್ನ ಮನೆಗಳಿಗೆ ಸರಬರಾಜಾಗುತ್ತಿರುವ ಕಾವೇರಿ ನೀರಿನ ಪೈಪ್ನಲ್ಲಿ ಕಲುಷಿತ ನೀರು ಬರುತ್ತಿದೆ.
ಈ ಕುರಿತಂತೆ ಜಲ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಈ ಏರಿಯಾದ ಮನೆಗಳ ನೀರಿನ ಪೈಪ್ಗಳಲ್ಲಿ ಸ್ಯಾನಿಟರಿ ಮಿಕ್ಸ್ ನೀರು ಬರುತ್ತಿದೆ. ಕಾವೇರಿ ನೀರಿನ ಪೈಪ್ನಲ್ಲಿ ಬರುತ್ತಿರುವ ಈ ನೀರು ಗಬ್ಬು ವಾಸನೆ ಬೀರುತ್ತಿದೆ.
ಈ ನೀರು ಕುಡಿಯೋಕೂ ಆಗಲ್ಲ, ಬಳಸೋಕೂ ಅಗಲ್ಲ ಹಾಗಂತ ನೀರನ್ನು ರಸ್ತೆಗೆ ಬಿಟ್ರೂ ಕೆಟ್ಟ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ ಹಲವಾರು ದಿನಗಳಿಂದ ಇಂತಹ ನೀರು ಬರುತ್ತಿದೆ.
ಈ ಕುರಿಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ಕುಡಿಯುವ ನೀರಿಲ್ಲದೆ ನಾವು ಬದುಕೋದು ಹೇಗೆ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ಕಲುಷಿತ ನೀರು ಸೇವನೆಯಿಂದ ಅನಾಹುತ ಸಂಭವಿಸಿದರೆ ಅದಕ್ಕೆ ನೀವೇ ಜವಬ್ದಾರರಾಗ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಭೂಪಾಲ್ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಜಲ ಮಂಡಳಿ ಅಧಿಕಾರಿಗಳು ಕೂಡಲೇ ಆಗಿರುವ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಭವಿಷ್ಯದಲ್ಲಿ ಆಗಬಹುದಾದ ಅನಾಹುತ ತಪ್ಪಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಎಚ್ಚರಿಸಿದ್ದಾರೆ.
