ನವದೆಹಲಿ,ಜ.31- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ನಾಳೆ ಪ್ರಸಕ್ತ 2026- 27 ನೇ ಸಾಲಿನ ಬಹುನಿರಿಕ್ಷೀತ ಕೇಂದ್ರ ಬಜೆಟ್ ಮಂಡಿಸಲಿದ್ದು, ದೇಶದ ಆರ್ಥಿಕ ವಲಯದಲ್ಲಿ ಮತ್ತು ಸಾಮಾನ್ಯ ಜನರ ದೈನಂದಿನ ಬದುಕಿನಲ್ಲಿ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ.
ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೂರನೇ ಪೂರ್ಣಪ್ರಮಾಣದ ಬಜೆಟ್ (2026-27) ಮಂಡಿಸಲಿದ್ದಾರೆ. ಈ ಬಾರಿ ಕೇಂದ್ರ ಸರ್ಕಾರವು ರೈತರಿಗಾಗಿ ಮತ್ತೊಂದು ಹೊಸ ಪ್ರಮುಖ ಯೋಜನೆಯನ್ನು ಘೋಷಿಸಲಿದೆ. ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ, ಮತ್ತು ತೆರಿಗೆ ಸರಳೀಕರಣದ ಮೇಲೆ ಗಮನಹರಿಸಲಿದ್ದು ಹೊಸ ತೆರಿಗೆ ಪದ್ಧತಿಯಲ್ಲಿ ಸರಳೀಕರಣ ಮತ್ತು ಮಧ್ಯಮ ವರ್ಗಕ್ಕೆ ನೀಡುವ ಸಾಧ್ಯತೆ ಇದೆ.
ಈ ಬಜೆಟ್ ದೇಶದ ಆರ್ಥಿಕ ಭವಿಷ್ಯವನ್ನು ನಿರ್ಧರಿಸುವಲ್ಲಿ ಮತ್ತು ಮಧ್ಯಮ ವರ್ಗದ ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.ಇದರ ಜೊತೆಗೆ ಫಾಸ್ಟ್ಟ್ಯಾಗ್ ನಿಯಮಗಳು, ತಂಬಾಕು ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ, ಎಲ್ಪಿಜಿ ಗ್ಯಾಸ್ ದರದಲ್ಲಿ ಬದಲಾವಣೆಗಳಾಗಲಿವೆ. ಫೆಬ್ರವರಿ 1 ರಿಂದ ಪಾನ್ ಮಸಾಲಾ, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳು ದುಬಾರಿಯಾಗುವ ಸಾಧ್ಯತೆಯಿದೆ. ಸರ್ಕಾರವು ಈ ಉತ್ಪನ್ನಗಳ ಮೇಲೆ ಜಿಎಸ್ಟಿ, ಅಬಕಾರಿ ಸುಂಕ ಮತ್ತು ಸೆಸ್ (ಸೆಸ್) ಸೇರಿದಂತೆ ಹೆಚ್ಚಿನ ತೆರಿಗೆ ವಿಧಿಸಲು ಮುಂದಾಗಿದೆ.
ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹೆಚ್ಚುವರಿ ತೆರಿಗೆಗಳನ್ನು ವಿಧಿಸಲಾಗುತ್ತದೆ. ಇದರಿಂದ ಇವುಗಳು ದುಬಾರಿಯಾಗಲಿದ್ದು, ಜೇಬಿಗೆ ಭಾರವಾಗಲಿವೆ.ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ವಾಹನ ಸವಾರರಿಗೆ ದೊಡ್ಡ ರಿಲೀಫ್ ನೀಡಿದೆ. ಫಾಸ್ಟ್ಟ್ಯಾಗ್ಗೆ ಸಂಬಂಧಿಸಿದ ಕೆವೈಸಿ ಪರಿಶೀಲನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದಾಗಿ ಘೋಷಿಸಿದೆ.
ಫಾಸ್ಟ್ಟ್ಯಾಗ್ ಅನ್ನು ಒಮೆ ಸಕ್ರಿಯಗೊಳಿಸಿದ ಅಂದರೆ ಆಕ್ಟಿವೇಟ್ ಮಾಡಿದ ನಂತರ, ಯಾವುದೇ ಹೆಚ್ಚುವರಿ ಕೆವೈಸಿ ಪರಿಶೀಲನೆಯ ಅಗತ್ಯವಿರುವುದಿಲ್ಲ.ವಾಹನದ ಮಾಹಿತಿಯನ್ನು ಪರಿಶೀಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಫಾಸ್ಟ್ಟ್ಯಾಗ್ ವಿತರಿಸುವ ಬ್ಯಾಂಕ್ಗಳೇ ತೆಗೆದುಕೊಳ್ಳಲಿವೆ. ಇದರಿಂದ ಗ್ರಾಹಕರಿಗೆ ಪದೇ ಪದೇ ಕೆವೈಸಿ ಅಪ್ಡೇಟ್ ಮಾಡುವ ಕಿರಿಕಿರಿ ತಪ್ಪಲಿದೆ. ಪ್ರಸ್ತುತ ಹೊಸ ತೆರಿಗೆ ಪದ್ಧತಿಯಡಿ 12.75 ಲಕ್ಷ ರೂ.ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳಲ್ಲಿ ಯಾವುದು ಹೆಚ್ಚು ಲಾಭದಾಯಕ ಮತ್ತು ತೆರಿಗೆ ಮಿತಿಯಲ್ಲಿ ಏನಾದರೂ ಬದಲಾವಣೆ ಆಗಲಿದೆಯೇ ಎಂಬ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.
ಎಲ್ಪಿಜಿ ಸಿಲಿಂಡರ್ ದರ ಪರಿಷ್ಕರಣೆ :
ಪ್ರತಿ ತಿಂಗಳ ಮೊದಲ ದಿನದಂತೆ, ಫೆಬ್ರವರಿ 1 ರಂದು ತೈಲ ಕಂಪನಿಗಳು ಎಲ್ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಿಸಲಿವೆ. ಗೃಹಬಳಕೆಯ ಮತ್ತು ವಾಣಿಜ್ಯ ಸಿಲಿಂಡರ್ಗಳ ಹೊಸ ದರಗಳು ಪ್ರಕಟವಾಗಲಿವೆ. ಕಳೆದ ತಿಂಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 14.50 ರೂ. ಇಳಿಕೆ ಮಾಡಲಾಗಿತ್ತು. ಈ ಬಾರಿ ಬೆಲೆ ಏರುತ್ತದೆಯೇ ಅಥವಾ ಇಳಿಯುತ್ತದೆಯೇ ಎಂಬುದು ಅಡುಗೆಮನೆಯ ಬಜೆಟ್ ಅನ್ನು ನಿರ್ಧರಿಸಲಿದೆ.
ಬಜೆಟ್ ದಿನದಂದೇ ಸಿಎನ್ಜಿ, ಪಿಎನ್ಜಿ, ಮತ್ತು ವಿಮಾನ ಇಂಧನ (ಎಟಿಎಫ್) ಬೆಲೆಗಳ ಪರಿಷ್ಕರಣೆಯಾಗುವ ಸಾಧ್ಯತೆಯಿದೆ. ಸಿಎನ್ಜಿ ಮತ್ತು ಪಿಎನ್ಜಿ ಬೆಲೆ ಏರಿಕೆಯಾದರೆ ಪ್ರಯಾಣ ಮತ್ತು ಅಡುಗೆ ವೆಚ್ಚ ಹೆಚ್ಚಾಗಲಿದೆ. ವಿಮಾನ ಇಂಧನ ದರ ಬದಲಾದರೆ ವಿಮಾನ ಪ್ರಯಾಣದ ಟಿಕೆಟ್ ದರದಲ್ಲಿ ಏರಿಳಿತವಾಗಬಹುದು.
ರಕ್ಷಣೆ :
ಇತ್ತೀಚಿನ ದಿನಗಳಲ್ಲಿ ಉದ್ಭವಿಸುತ್ತಿರುವ ಭೌಗೋಳಿಕ ರಾಜಕೀಯ ಸವಾಲುಗಳ ಹಿನ್ನೆಲೆಯಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ಹಂಚಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಳೆದ ವರ್ಷ ಭಾರತದ ಯಶಸ್ವಿ ಭಯೋತ್ಪಾದನಾ ವಿರೋಧಿ ಅಭಿಯಾನ ಆಪರೇಷನ್ ಸಿಂಧೂರ ನಂತರ, ಸರ್ಕಾರವು ರಕ್ಷಣಾ ವಲಯದ ಮೇಲೆ ವಿಶೇಷ ಗಮನ ಹರಿಸುವ ಸಾಧ್ಯತೆಯಿದೆ. ಏಕೆಂದರೆ ಅದು ವರ್ಧಿತ ಬಂಡವಾಳ ವೆಚ್ಚಕ್ಕೆ ಒತ್ತು ನೀಡುತ್ತದೆ. ಮುಂಬರುವ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಷರತ್ತುಗಳನ್ನು ಸರ್ಕಾರ ಸಡಿಲಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಫ್ಡಿಐ ಮಿತಿಯನ್ನು ಪ್ರಸ್ತುತ ಶೇ. 49 ರಿಂದ ಶೇ. 74 ಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ವಿದೇಶಿ ಹೂಡಿಕೆಗೆ ಇತರ ಷರತ್ತುಗಳನ್ನು ಸಹ ಸರ್ಕಾರ ಸಡಿಲಿಸಬಹುದು.
ರಿಯಲ್ ಎಸ್ಟೇಟ್ :
ಪರಿಷ್ಕೃತ ಆದಾಯ ತೆರಿಗೆ ಪದ್ಧತಿಯಡಿ ಸ್ವಯಂ ಆಕ್ರಮಿತ ಆಸ್ತಿಗಳಿಗೆ ಗೃಹ ಸಾಲಗಳ ಮೇಲಿನ ಬಡ್ಡಿಗೆ ಕಡಿತಗಳನ್ನು ಕೇಂದ್ರವು ಅನುಮತಿಸಬಹುದು. ಪ್ರಸ್ತುತ, ಅಂತಹ ಯಾವುದೇ ಕಡಿತ ಲಭ್ಯವಿಲ್ಲ. ಆದರೆ, ಹಳೆಯ ತೆರಿಗೆ ಪದ್ಧತಿಯು ವಾರ್ಷಿಕ 2 ಲಕ್ಷ ರೂ.ಗಳವರೆಗೆ ಕಡಿತವನ್ನು ಅನುಮತಿಸುತ್ತದೆ. ಈ ಕ್ರಮವು ವಸತಿ ಬೇಡಿಕೆಯನ್ನು ಗಮನಾರ್ಹವಾಗಿ ಸುಧಾರಿಸಬಹುದು. ಗೃಹ ಸಾಲಗಳ ಮೇಲೆ ಕ್ರೆಡಿಟ್ ಲಿಂಕ್್ಡ ಸಬ್ಸಿಡಿ ಸ್ಕೀಮ್ ಅನ್ನು ಪುನಃ ಪರಿಚಯಿಸುವ ಮೂಲಕ ಮಧ್ಯಮ-ಆದಾಯ ಮತ್ತು ಕೈಗೆಟುಕುವ ವಸತಿ ಬೇಡಿಕೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂಬ ಬೇಡಿಕೆ ಇದೆ. ಇದು ಸಾಲದ ಮೊತ್ತದ ಶೇ. 3 ರಿಂದ 4 ರಷ್ಟು ಸಬ್ಸಿಡಿಗಳನ್ನು ನೀಡುತ್ತದೆ. ಹೆಚ್ಚುತ್ತಿರುವ ನಿರ್ಮಾಣ ಮತ್ತು ಭೂ ವೆಚ್ಚಗಳ ನಡುವೆ ಕೈಗೆಟುಕುವ ವಸತಿ ಬೆಲೆಯ ಮಿತಿಯನ್ನು ಪ್ರಸ್ತುತ 45 ಲಕ್ಷ ರೂ.ಗಳಿಂದ 75 ಲಕ್ಷ ರೂ.ಗಳಿಗೆ ಬದಲಾಯಿಸುವ ನಿರೀಕ್ಷೆಯಿದೆ.
ಹೋಟೆಲ್ಗಳು :
ದೇಶೀಯ ಬೇಡಿಕೆಯು ಪೂರೈಕೆಗಿಂತ ಹೆಚ್ಚುತ್ತಿದೆ. ಆದರೆ ಹೊಸ ಹೋಟೆಲ್ ಯೋಜನೆಗಳು ಭೂಮಿ, ನಿಯಂತ್ರಣದಂತಹ ಸವಾಲುಗಳನ್ನು ಎದುರಿಸುತ್ತಿವೆ. ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಈ ವಲಯವು ಸುಮಾರು ಶೇ.7 ರಿಂದ 8 ರಷ್ಟು ಕೊಡುಗೆ ನೀಡುತ್ತಿದೆ. ದೇಶೀಯ ಪ್ರಯಾಣ, ಧಾರ್ಮಿಕ ಪ್ರವಾಸೋದ್ಯಮ, ಮದುವೆ, ಸಭೆ, ಸಮೇಳನ, ಪ್ರದರ್ಶನಗಳು ಮತ್ತು ವೈದ್ಯಕೀಯ ಪ್ರಯಾಣಗಳಲ್ಲಿ ಈ ಉದ್ಯಮಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೋಟೆಲ್ಗಳು 46.5 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿವೆ.
ಹೀಗಾಗಿ, ಮೂಲಸೌಕರ್ಯ ವಲಯದಲ್ಲಿ ಹೋಟೆಲ್ ಉದ್ಯಮವನ್ನು ಪ್ಯಾನ್-ಇಂಡಿಯಾ ಸೇರ್ಪಡೆಗೊಳಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಈ ಕ್ರಮ ಸಾಲದ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳಿ, ತಾಮ್ರ ಮತ್ತು ಸತುವಿನ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಆಮದು ಅವಲಂಬನೆಯನ್ನು ಕಡಿತಗೊಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ನೀತಿಯನ್ನು ರೂಪಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
