ಬೆಂಗಳೂರು, ಫೆ.12- ವರಿಷ್ಠರ ಜೊತೆ ನಡೆದಿರುವ ಮಾತುಕತೆಯನ್ನು ತಾವು ಹಾದಿ ಬೀದಿಯಲ್ಲಿ ಚರ್ಚೆ ಮಾಡುವುದಿಲ್ಲ. ತಾವು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡಲಿಕ್ಕೆ, ಗಾಳಿಯಲ್ಲಿ ಗುಂಡು ಹೊಡೆಯಲು ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈವರೆಗೂ ದೆಹಲಿಯ ಪ್ರವಾಸದ ವೇಳೆ ತಮಷ್ಟಕ್ಕೆ ತಾವು ಬಂದು ವಾಪಸ್ ಹೋಗುತ್ತಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ಹೊರತುಪಡಿಸಿದರೆ ಅದಕ್ಕಿಂತಲೂ ಉನ್ನತ ಮಟ್ಟದ ನಾಯಕರ ಭೇಟಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಸಾಧ್ಯವಾಗಿರಲಿಲ್ಲ.
ಆದರೆ ಈ ಬಾರಿಯ ಭೇಟಿ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದಿದೆ. ಅಸ್ಸಾಂ ವಿಧಾನಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಡಿ.ಕೆ.ಶಿವಕುಮಾರ್ ಈ ಬಾರಿ ವರಿಷ್ಠರನ್ನು ಭೇಟಿಯಾಗಲೇಬೇಕು ಎಂದು ಬಿಗಿಪಟ್ಟು ಹಿಡಿದಿದ್ದರು. ಒತ್ತಡಕ್ಕೆ ಮಣಿದ ವರಿಷ್ಠರು ಕೊನೆಗೂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ಈ ಬಗ್ಗೆ ಮಾಹಿತಿ ನೀಡುವಾಗ ಡಿ.ಕೆ.ಶಿವಕುಮಾರ್ ನಿರಾಶೆಯ ಗುಂಗಿನಲ್ಲಿದ್ದಂತೆ ಕಂಡು ಬಂತು. ತಾವು ದೆಹಲಿಗೆ ಅಸ್ಸಾಂ ವಿಧಾನಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದು ಇದೇ ವೇಳೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದೇನೆ.
ವರಿಷ್ಠರ ಜೊತೆ ಒಳಗಡೆ ಏನು ಚರ್ಚೆಯಾಗಿದೆ ? ಯಾರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಬಹಿರಂಗ ಪಡಿಸಬೇಕಾದ ಅವಶ್ಯಕತೆ ಇಲ್ಲ. ಬೀದಿಯಲ್ಲಿ ನಿಂತು ತಾವು ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ.
ವರಿಷ್ಠರನ್ನುಭೇಟಿಯಾಗಿದ್ದೇನೆ ಏನೇನು ಮಾತನಾಡಬೇಕಿತ್ತೋ ಅದನ್ನೆಲ್ಲಾ ಮಾತನಾಡಿದ್ದೇನೆ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದೇನೆ. ದೆಹಲಿಗೆ ಬಂದ ಮೇಲೆ ಯಾರನ್ನೆಲ್ಲಾ ಭೇಟಿ ಮಾಡಬೇಕು, ಏನೆಲ್ಲಾ ವಿಚಾರಗಳನ್ನು ತಿಳಿಸಬೇಕಿತ್ತೋ ಅವುಗಳನ್ನು ತಿಳಿಸಿದ್ದೇನೆ.
ಏನು ಮಾತನಾಡಿದ್ದೇನೆ ಎಂದು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದರು. ನಾನು ಬಂದಿರುವುದೇ ರಾಜಕಾರಣ ಮಾಡಲಿಕ್ಕೆ. ಗಾಳಿಯಲ್ಲಿ ಗುಂಡು ಹೊಡೆಯಲು ಅಲ್ಲ ಎಂದು ಹೇಳಿದ್ದಾರೆ.ಅಸ್ಸಾಂ ಹಾಗೂ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಸಂಬಂಧಪಟ್ಟಂತೆ ಸುದೀರ್ಘ ಚರ್ಚೆಯಾಗಿದೆ. ಲಭ್ಯ ಇರುವ ಎಲ್ಲಾ ಸಾಧ್ಯತೆಗಳ ಬಗ್ಗೆ ನಾವು ವಿಶ್ಲೇಷಣೆ ಮಾಡಿದ್ದೇವೆ ಎಂದು ಹೇಳಿದರು.
