ಬೆಂಗಳೂರು,ಫೆ.12- ಕೇಂದ್ರದ ನಾಲ್ಕು ಹೊಸ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರ ಸೇರಿದಂತೆ ಮೈಸೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಕಾರ್ಮಿಕ ಸಂಘಟನೆಗಳು ನಗರದ ಪುರಭವನ ಎದುರು ಪ್ರತಿಭಟನೆ ನಡೆಸಿ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದವು.
ಪ್ರತಿಭಟನೆಯಿಂದ ಹಲವು ಸೇವೆಗಳಲ್ಲಿ ವ್ಯತ್ಯಯವಾಗುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ ಯಾವುದೇ ವ್ಯತ್ಯಯ ಕಂಡು ಬರಲಿಲ್ಲ. ಎಂದಿನಂತೆ ಶಾಲಾ ಕಾಲೇಜು, ಸಾರ್ವಜನಿಕ ವಲಯದ ಘಟಕಗಳು, ಸಾರಿಗೆ ಬಸ್ಗಳ ಸೇವೆ ಲಭ್ಯವಿದ್ದು, ಆಸ್ಪತ್ರೆ,ಆಂಬ್ಯುಲೆನ್ಸ್ , ನೀರು ವಿದ್ಯುತ್ ಪೂರೈಕೆ, ಅಗ್ನಿಶಾಮಕ ಸೇವೆ, ವಿಮಾನ ನಿಲ್ದಾಣ ಮತ್ತು ರೈಲುಗಳು ಸೇರಿದಂತೆ ಅಗತ್ಯ ಸೇವೆಗಳು ಸಮಾನ್ಯವಾಗಿ ಕಾರ್ಯನಿರ್ವಹಿಸಿದವು.
ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿದ್ದ ಭಾರತ್ ಬಂದ್ಗೆ ಅಷ್ಟೇನೂ ಪರಿಣಾಮ ಬೀರಿದಂತೆ ಕಂಡು ಬರಲಿಲ್ಲ. ನಗರದ ಪುರಭವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂಜಾಗೃತೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
